ಬೆಂಗಳೂರು: ಉಚ್ಚಾಟಿತ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಕಾಡುಕೊಂಡನಹಳ್ಳಿಯ ಖಾಸಗಿ ಸಭಾಭವನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಸಭೆ ಯಲ್ಲಿ ಸಿ.ಕೆ.ನಾಣು ಅವರನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ.
ಇಂದು ನಗರದ ಖಾಸಗಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ದೇವೇಗೌಡರ ಜೆಡಿಎಸ್ ಗೆ ಸೆಡ್ಡು ಹೊಡೆದು ನಾಣು -ಇಬ್ರಾಹಿಂ ಬಣ ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ಅವರನ್ನು ಆಯ್ಕೆ ಮಾಡಿದೆ. ಸಭೆಯಲ್ಲಿ ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಒಂದು ಸಾಲಿನ ನಿರ್ಣಯವನ್ನು ಓದಿ ಹೇಳಿದ ಬಳಿಕ ನಿರ್ಣಯ ಅಂಗೀಕಾರವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಉಚ್ಚಾಟಿತ ಅಧ್ಯಕ್ಷ ಸಿಎಂ ಇಬ್ರಾಹಿಂ, ‘ಜಾತ್ಯತೀತ ತತ್ವದ ಮೇಲೆ ನಿಂತಿರುವ ಜೆಡಿಎಸ್, ಮಹಾತ್ಮಾ ಗಾಂಧೀಜಿ ಅವರ ಸಿದ್ದಾಂತವನ್ನು ಪಾಲಿಸುವ ಪಕ್ಷವಾಗಿದೆ. ಆದರೆ ಗಾಂಧೀಜಿ ಅವರನ್ನು ವಿರೋಧಿಸುವವರೊಂದಿಗೆ ಜೆಡಿಎಸ್ ಸ್ನೇಹ ಬೆಳೆಸುವುದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.
‘ ಪಕ್ಷದ ಇತರರ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ಇದನ್ನು ಪ್ರಶ್ನಿಸುವ ಅಧಿಕಾರ ಪಕ್ಷದಲ್ಲಿರುವ ಇತರರಿಗೂ ಇದೆ. ಗಾಂಧೀಜಿಯವರ ತತ್ವ- ಸಿದ್ದಾಂತಗಳನ್ನು ಬಲಿಕೊಟ್ಟು ಬರೀ ಚುನಾವಣೆಯ ಗೆಲುವಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಎಚ್.ಡಿ.ದೇವೇಗೌಡರ ವರ್ತನೆಯನ್ನು ಇಂದಿನ ಸಭೆಯಲ್ಲಿ ನಾವು ಖಂಡಿಸುತ್ತೇವೆ’ ಎಂದು ಸಿಎಂ ಇಬ್ರಾಹಿಂ ಹೇಳಿದರು.