ಬೆಂಗಳೂರು: ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯ ನೂರನೆ ವಾರ್ಷಿಕ ಉದ್ಘಾಟನಾ ಮಹಾ ಸಮ್ಮೇಳನವನ್ನು ಜ.28ರ ಸಂಜೆ 5 ಗಂಟೆಗೆ ಬೆಂಗಳೂರು ಅರಮನೆ ಮೈದಾನ(ಶಂಸುಲ್ ಉಲಮಾ ನಗರ)ದಲ್ಲಿ ಆಯೋಜಿಸಲಾಗಿದೆ ಎಂದು ಕೋಝಿಕ್ಕೋಡ್ನ ಖಾಝಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಸೈಯದ್ ಮುಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ ತಿಳಿಸಿದರು.
ಬುಧವಾರ ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.28ರಂದು ಬೆಳಗ್ಗೆ 9 ಗಂಟೆಗೆ ತವಕ್ಕಲ್ ಮಸ್ತಾನ್ ದರ್ಗಾ ಝಿಯಾರದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಅರಮನೆ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಸಂಜೆ 5 ಗಂಟೆಗೆ ಸಾರ್ವಜನಿಕ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಸ್ವಾಗತಿಸಲಿದ್ದಾರೆ ಎಂದರು.
ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಮುನ್ನುಡಿ ಭಾಷಣ ಮಾಡಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪಾಣಕ್ಕಾಡ್ ಸೈಯದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಡಿ.ಕೆ.ಶಿವಕುಮಾರ್, ರಾಜ್ಯದ 2500 ವಿಖಾಯ ಸೇವಕರನ್ನು ಸಮರ್ಪಿಸಲಿದ್ದಾರೆ. ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಕೆ.ಅಲಿಕುಟ್ಟಿ ಮುಸ್ಲಿಯಾರ್ 100ನೇ ವಾರ್ಷಿಕ ಪ್ರಯುಕ್ತ ನಡೆಸುವ ಪದ್ಧತಿಗಳನ್ನು ಘೋಷಿಸಲಿದ್ದಾರೆ ಎಂದು ಸೈಯದ್ ಮುಹಮ್ಮದ್ ಕೋಯ ತಂಙಳ್ ಹೇಳಿದರು.
ವಿಶೇಷ ಅತಿಥಿಗಳಾಗಿ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಡಾ.ಜಿ.ಪರಮೇಶ್ವರ್, ಝಮೀರ್ ಅಹ್ಮದ್ ಖಾನ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಬೈರತಿ ಸುರೇಶ್, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಎನ್.ಎ.ಹಾರಿಸ್, ರಿಝ್ವಾನ್ ಅರ್ಶದ್ ಭಾಗವಹಿಸಲಿದ್ದಾರೆ. ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಕೋಶಾಧಿಕಾರಿಯದ ಪಿ.ಪಿ.ಉಮರ್ ಮುಸ್ಲಿಯಾರ್ ಕೋಯೋಡ್ ಭಾಷಣವನ್ನು ನಡೆಸಲಿದ್ದಾರೆ ಎಂದು ಅವರು ಹೇಳಿದರು.
2016 ಫೆಬ್ರವರಿಯಲ್ಲಿ ಕೇರಳದ ಆಲಪ್ಪುಝದಲ್ಲಿ ನಡೆದ ಸಮಸ್ತದ 90ನೆ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಮಹೂರ್ಂ ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ 2026ರ ಫೆಬ್ರವರಿಯಲ್ಲಿ ಸಮಸ್ತದ 100ನೆ ವಾರ್ಷಿಕ ಮಹಾಸಮ್ಮೇಳನ ನಡೆಯಲಿದೆ ಎಂದು ಘೋಷಿಸಿದ್ದರು. ಈ ಉದ್ಘಾಟನಾ ಸಮ್ಮೇಳನದಲ್ಲಿ ನೂರನೆ ವಾರ್ಷಿಕ ಸಮ್ಮೇಳನದ ದಿನಾಂಕ ಹಾಗೂ ಸ್ಥಳವನ್ನು ಘೋಷಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ನೂರು ಸಂವತ್ಸರವನ್ನು ಪೂರ್ಣಗೊಳಿಸುತ್ತಿರುವ ಸಮಸ್ತವು, ದಕ್ಷಿಣ ಭಾರತೀಯ ಮುಸಲ್ಮಾನರ ಅಧಿಕೃತ ವಿದ್ವಾಂಸ ಒಕ್ಕೂಟವಾಗಿದೆ. 40 ವಿದ್ವಾಂಸರಿರುವ ಮುಖ್ಯ ಸಮಿತಿಯ ಅಧೀನದಲ್ಲಿ 14 ಉಪಸಮಿತಿಗಳು ಕಾರ್ಯಾಚರಿಸುತ್ತಿವೆ. ಸಮಸ್ತ ಕೇರಳ ಇಸ್ಲಾಂ ಧರ್ಮದ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ 10,762 ಮದ್ರಸಾಗಳು ಕಾರ್ಯಚರಿಸುತ್ತಿವೆ. ಒಂದು ಲಕ್ಷದಷ್ಟು ಅಧ್ಯಾಪಕರು ಮತ್ತು 12 ಲಕ್ಷದಷ್ಟು ವಿದ್ಯಾರ್ಥಿಗಳು ಈ ಮದ್ರಸಾ ಯೋಜನೆಯ ಭಾಗವಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಾಥಮಿಕ ಶಿಕ್ಷಣದಿಂದ 12ನೆ ತರಗತಿಯವರೆಗೆ ಮದ್ರಸಾ ಶಿಕ್ಷಣ, ಉನ್ನತ ಶಿಕ್ಷಣಕ್ಕಾಗಿ ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ನೂರಾರು ಅರಬಿಕ್ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜು ಮತ್ತು ವಿವಿಧ ಶೈಕ್ಷಣಿಕ ಸಂಸ್ಥೆಗಳು ಸಮಸ್ತದ ಅಧೀನದಲ್ಲಿ ಕಾರ್ಯಾಚರಿಸುತ್ತಿವೆ. ನೂರನೆ ವಾರ್ಷಿಕದ ಭಾಗವಾಗಿ ಸಮಸ್ತದ ಶೈಕ್ಷಣಿಕ ಸಾಂಸ್ಕøತಿಕ, ಸಾಮಾಜಿಕ, ಸೇವಾ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಮತ್ತು ಸಕ್ರಿಯಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಭಾರತದ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಕೋಮು ಸೌಹಾರ್ದತೆಯನ್ನು ನೆಲೆನಿಲ್ಲಿಸಲು ಯಾವಾಗಲೂ ಶ್ರಮಿಸುತ್ತಿರುವ ಒಂದು ಸಂಘಟನೆಯಾಗಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಮತ್ತು ವಿಶೇಷವಾಗಿ ಕೇರಳದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವಲ್ಲಿ ಸಮಸ್ತ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಘಾಟನಾ ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಸೈಯದ್ ಸಾಬಿಖ್ ಅಲಿ ಶಿಹಾಬ್ ತಂಙಳ್, ಸಂಯೋಜಕ ಕೆ.ಮಾಸ್ಟರ್ ಮೋಯಿನ್ಕುಟ್ಟಿ, ಕಾರ್ಯಾಧ್ಯಕ್ಷ ಸೈಯದ್ ಸಿದ್ದೀಕ್ ತಂಙಳ್, ಕಾರ್ಯಸಂಯೋಜಕ ಪಿ.ಎಂ.ಲತೀಫ್ ಹಾಜಿ, ಸಂಚಾಲಕರಾದ ಮುಫ್ತಿ ರಫೀಕ್ ಹುದವಿ ಕೋಲಾರ, ಮೌಲಾನ ಅನೀಸ್ ಕೌಸರಿ, ಮಾಧ್ಯಮ ವಿಭಾಗದ ಮುಖ್ಯಸ್ಥ ಶಂಸುದ್ದೀನ್ ಕೂಡಾಲಿ ಉಪಸ್ಥಿತರಿದ್ದರು.