ಬೆಂಗಳೂರು: ಕರ್ನಾಟಕ ಅಂಚೆ ವೃತ್ತದ ವತಿಯಿಂದ ಜ.5ರಿಂದ ಜ.8ರ ವರೆಗೆ ನಗರದ ಕಂಠೀರದ ಒಳಾಂಗಣ ಕ್ರೀಡಾಂಗಣದಲ್ಲಿ ‘ಕರ್ನಾಪೆಕ್ಸ್ 2024-ಅಂಚೆ ಚೀಟಿಗಳ ಹಬ್ಬ’ ಮತ್ತು 13ನೆ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ ಎಂದು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಬುಧವಾರ ಪ್ರೆಸ್ಕ್ಲಬ್ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನವು 2019ರಲ್ಲಿ ಮಂಗಳೂರಿನಲ್ಲಿ ಜರುಗಿತು. ಈ ಬಾರಿಯ ಕರ್ನಾಪೆಕ್ಸ್-2024 ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಅಂಚೆ ಚೀಟಿ ಸಂಗ್ರಹಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಜನಪ್ರಿಯಗೊಳಿಸಲು ಹಾಗೂ ಅಂಚೆ ಚೀಟಿ ಸಂಗ್ರಹಣಕಾರರಿಗೆ ಅವಕಾಶ ನೀಡಲು ಇದರ ಉದ್ದೇಶವಾಗಿದೆ ಎಂದರು.
ಈ ಪ್ರದರ್ಶನದಲ್ಲಿ ಇತಿಹಾಸ, ಸಂಸ್ಕೃತಿ, ಕಲೆ, ಪರಂಪರೆ, ವಿಜ್ಞಾನ, ತಂತ್ರಜ್ಞಾನ, ವನ್ಯಜೀವಿಗಳು, ಸಸ್ಯ ಸಂಪತ್ತು ಮುಂತಾದ ವಿಷಯಗಳನ್ನು ಅಂಚೆ ಚೀಟಿಗಳು, ವಿಶೇಷ ಲಕೋಟೆಗಳು, ವಿಶೇಷ ಮತ್ತು ಸಚಿತ್ರ ಪದ್ದತಿಗಳ ಅಪರೂಪ ಮತ್ತು ವಿಭಿನ್ನ ಸಂಗ್ರಹಗಳನ್ನು ಪ್ರದರ್ಶಿಸಲಾಗುವುದು ಎಂದರು.
ಜ.5 ರಂದು ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ, ಜ.6ರಂದು ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ, ಜ.7ರಂದು ಮಾನಸಿಕ ಸ್ವಾಸ್ಥ್ಯ ಮತ್ತು ಕೀಡೆ, ಜ.8ರಂದು ಮಹಿಳಾ ಸಬಲೀಕರಣದ ವಿಶೇಷ ಲಕೋಟೆಗಳ ಬಿಡುಗಡೆಯು ಕಾರ್ಯಕ್ರಮ ಇರುತ್ತದೆ. ಲಲಿತ ಮಹಲ್ನ 100 ವರ್ಷಗಳು ಮತ್ತು ಮೈಸೂರು ಸ್ಯಾಂಡಲ್ ಕುರಿತಂತೆ ವಿಶೇಷ ಲಕೋಟೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್, ಶಿವಾಜಿನಗರ ವಿಧಾನಸಭಾ ಸದಸ್ಯ ರಿಜ್ವಾನ್ ಅರ್ಷದ್ ಸೇರಿಂದಂತೆ ಅನೇಕ ಗಣ್ಯರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ಅವರಿಂದ ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಂದು ರಾಜೇಂದ್ರ ಕುಮಾರ್ ಮಾಹಿತಿ ನೀಡಿದರು.