✍️ ಕುಂಟನಹಳ್ಳಿ ಮಲ್ಲೇಶ
ಮಂಡ್ಯ, ಡಿ.25: ಟ್ರಯತ್ಲಾನ್ ಕ್ರೀಡೆಯಲ್ಲಿ ಮಂಡ್ಯ ಜಿಲ್ಲೆಯಿಂದ ಭರವಸೆ ಮೂಡಿಸಿರುವ ಏಕೈಕ ಕ್ರೀಡಾಪಟು ಎಂದರೆ ಅದು ಭರತ್ ದ್ಯಾವಪ್ಪ.
ಭರತ್ ಅವರು ತಾನು ನಂಬಿರುವ ಕ್ರೀಡೆಯಲ್ಲಿಯೇ ಸಾಧನೆ ಮಾಡಬೇಕೆಂದು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 3 ಮತ್ತು 4ನೇ ಸ್ಥಾನವನ್ನು ಖಚಿತಪಡಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗು ತ್ತಿದ್ದಾರೆ.
ಪ್ರಸ್ತುತ ಮಂಡ್ಯದ ಸರಕಾರಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಭರತ್ ಹಲವು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಹೆಸರು ತಂದಿದ್ದಾರೆ. ಭಾರತೀಯ ಟ್ರಯತ್ಲಾನ್ ಒಕ್ಕೂಟ(ಐಟಿಎಫ್) ಜೂನ್ 2019ರಲ್ಲಿ ನಡೆಸಿದ ಅಕ್ವಾತ್ಲಾನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ 4ನೇ ಸ್ಥಾನ ತಮ್ಮದಾಗಿಸಿಕೊಳ್ಳುವ ಮೂಲಕ ವಿಶ್ವಾಸದ ಹೆಜ್ಜೆ ಗುರುತು ಮೂಡಿಸಿದರು. 2021ರ ಸೆಪ್ಟಂಬರ್ನಲ್ಲಿ ನಡೆದ ಧನುಷ್ಕೋಡಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಗಳಿಸಿದ್ದಾರೆ.
2022ರ ಸೆಪ್ಟಂಬರ್ನಲ್ಲಿ ಉದಯಪುರದಲ್ಲಿ ನಡೆದ ಕ್ರೀಡಾಕೂಟದಲ್ಲಿ 3ನೇ ಸ್ಥಾನ ತಮ್ಮದಾಗಿಸಿಕೊಳ್ಳುವ ಮೂಲಕ ತಮ್ಮ ಸಾಧನೆಯನ್ನು ಮತ್ತಷ್ಟು ಖಚಿತಪಡಿಸಿದ ಅವರು, ಎಪ್ರಿಲ್ 2023ರಲ್ಲಿ, ಚಿಕ್ಕಬಳ್ಳಾಪುರ, ಅದೇ ತಿಂಗಳು ತಮಿಳುನಾಡು, ಆಗಸ್ಟ್ನಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಿ ಗಮನಾರ್ಹ ಆಟಗಾರ ಎನಿಸಿದ್ದಾರೆ. ಈಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಈಜು, ಓಟ, ಸೈಕ್ಲಿಂಗ್ ಒಳಗೊಂಡ ಈ ಟ್ರಯತ್ಲಾನ್ ಕ್ರೀಡೆಗೆ ಆರಂಭದಲ್ಲಿ ಚೆನ್ನೈನಲ್ಲಿ ತರಬೇತಿ ಪಡೆದ ಭರತ್, ಈಗ ಈಜಿನ ತರಬೇತಿಯನ್ನು ಮಂಡ್ಯದ ಪ್ರತಿಷ್ಠಿತ ಪಿಇಎಸ್ ಈಜು ಕೊಳದಲ್ಲಿ ಪಡೆಯುತ್ತಿದ್ದಾರೆ.
► ಇದೊಂದು ಅಪ್ಪಟ ದೇಶಿ ಪ್ರತಿಭೆ: ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದ ಸಿ.ಎಂ.ದ್ಯಾವಪ್ಪ ಮತ್ತು ಕೆ.ಆರ್.ರುಕ್ಮಿಣಿ ಅವರ ಮಗನಾಗಿದ್ದು, ತಂದೆ, ತಾಯಿ ಮಗನ ಆಸೆಯನ್ನು ಅರ್ಥಮಾಡಿಕೊಂಡು ಭರತ್ಗೆ ಪ್ರೋತ್ಸಾಹ ನೀಡುತಿದ್ದಾರೆ.
“ಟ್ರಯತ್ಲಾನ್ ಕ್ರೀಡೆಯಲ್ಲಿ ಸಾಧನೆ ಮಾಡುವ ಮಹದಾಸೆ ಹೊಂದಿದ್ದೇನೆ. ಅದರ ಜತೆಗೆ ಶಿಕ್ಷಣವೂ ಬೇಕು. ಆದರೆ, ಕ್ರೀಡೆ ನನ್ನ ಮೊದಲ ಆದ್ಯತೆ. ಈ ಹಾದಿಯಲ್ಲಿ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸವಿದೆ. ನನ್ನ ಆಶಯಕ್ಕೆ ನನ್ನ ತಂದೆ, ತಾಯಿ ನೀಡುತ್ತಿದ್ದಾರೆ ಅವರಿಗೆ ನಾನು ಚಿರಋಣಿ”
-ಭರತ್ ದ್ಯಾವಪ್ಪ, ಕ್ರೀಡಾಪಟು