ಹೊಸದಿಲ್ಲಿ : ಡಬ್ಲ್ಯುಪಿಎಲ್ ಸ್ಪರ್ಧಾವಳಿಯು ದೇಶೀಯ ಆಟಗಾರ್ತಿಯರಿಗೆ ಹೊಸ ವೇದಿಕೆ ಕಲ್ಪಿಸಿದೆ. ಕ್ರಿಕೆಟ್ ನಿಂದ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅವಕಾಶವನ್ನು ನೀಡಿದೆ ಎಂದು ಮಹಿಳೆಯರ ಪ್ರೀಮಿಯರ್ ಲೀಗ್ ಚಾಂಪಿಯನ್ ಆರ್ಸಿಬಿಯ ಬೌಲಿಂಗ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಆರ್ಸಿಬಿಯ ಸ್ಪಿನ್ನರ್ ಗಳ ಪೈಕಿ ಶ್ರೇಯಾಂಕಾ(4-12)ಅವರ ಶ್ರೇಷ್ಠ ಬೌಲಿಂಗ್ , ಸೋಫಿ ಡಿವೈನ್, ನಾಯಕಿ ಸ್ಮತಿ ಮಂಧಾನ ಹಾಗೂ ಪೆರ್ರಿ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮೊದಲ ಬಾರಿ ಡಬ್ಲ್ಯುಪಿಎಲ್ ಪ್ರಶಸ್ತಿ ಜಯಿಸಿದೆ.
ನಮಗೆ ಈಗ ಕ್ರಿಕೆಟ್ನ ದ ಏನಾದರೂ ಸಿಗುತ್ತದೆ. ಒಂದೆರಡು ವರ್ಷಗಳ ಹಿಂದೆ ಈ ಕ್ರೀಡೆಯಿಂದ ವೃತ್ತಿಜೀವನವಿದೆಯೇ ಎಂದು ಎಲ್ಲರೂ ಪ್ರಶ್ನಿಸಿದ್ದರು. ಡಬ್ಲ್ಯುಪಿಎಲ್ ದೇಶೀಯ ಆಟಗಾರ್ತಿಯರಿಗೆ ವೇದಿಕೆಯನ್ನು ತೆರೆದಿದೆ. ಇದಕ್ಕೆ ಬಿಸಿಸಿಐಗೆ ಧನ್ಯವಾದಗಳು. ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡುತ್ತಿರುವುದು ಸಂತೋಷಕರವಾಗಿದೆ. ಡಬ್ಲ್ಯುಪಿಎಲ್ ಒಂದು ದೊಡ್ಡ ಟೂರ್ನಿಯಾಗಿದ್ದು, ಅಲ್ಲಿ ನಾವು ನಮ್ಮ ಕೌಶಲ್ಯವನ್ನು ಪ್ರದರ್ಶಿಸಬಹುದು ಎಂದು ಶ್ರೇಯಾಂಕಾ ಹೇಳಿದರು.
ನನಗೀಗ ತುಂಬಾ ಸಂತೋಷವಾಗಿದ್ದು, ತವರುಪಟ್ಟಣ ಬೆಂಗಳೂರಿಗೆ ಹೋಗಲು ಉತ್ಸುಕಳಾಗಿದ್ದೇನೆ. ನಾವೀಗ ಟ್ರೋಫಿ ಜಯಿಸಿದ್ದೇವೆ. ನಮಗೆ ಇದನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಆದಷ್ಟು ಬೇಗನೆ ಬೆಂಗಳೂರಿಗೆ ತೆರಳಿ ಜನಸಮೂಹ ನಮ್ಮ ಹೆಸರನ್ನು ಜಪಿಸುವುದನ್ನು ಕೇಳಲು ಬಯಸಿದ್ದೇನೆ ಎಂದು ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ತಿಳಿಸಿದರು.