ಉಡುಪಿ, ಜ.6: ಇಂದು ನಿಧನರಾದ ಡಾ.ಅಮೃತ ಸೋಮೇಶ್ವರರು ಅವರಿಗೆ ಉಡುಪಿ ಯಕ್ಷಗಾನ ಕಲಾರಂಗ ಸಂತಾಪ ವ್ಯಕ್ತಪಡಿಸಿದೆ.
ಅವಿಭಜಿತ ದಕ್ಷಿಣಕನ್ನಡದ ಸುಮಾರು ಆರು ದಶಕಗಳ ಸಾಂಸ್ಕೃತಿಕ ಚರಿತ್ರೆ ಯಲ್ಲಿ ಪ್ರಥಮ ಪಂಕ್ತಿಯ ಹೆಸರು ಅಮೃತ ಸೋಮೇಶ್ವರರದ್ದು. ಕತೆ, ಪ್ರಬಂಧ, ನಾಟಕ, ಕತೆಗಳು, ಸಂಶೋಧನೆ ಹಲವು ವಿಭಾಗಗಳಲ್ಲಿ ಕೃಷಿ ನಡೆಸಿದವರು. ಹೊಸತಲೆಮಾರನ್ನು ಗಾಢವಾಗಿ ಪ್ರಭಾವಿಸಿ, ತಮ್ಮ ಸುತ್ತಮುತ್ತಲಿನ ಸಮಾಜವನ್ನು ಕ್ರಿಯಾಶೀಲವಾಗಿ, ಚಿಂತನ ಶೀಲವಾಗಿ ಸಿದ್ಧಗೊಳಿಸಿದವರು.
ಯಕ್ಷಗಾನ ಪ್ರಸಂಗರಚನೆ, ಕಾರ್ಯಾಗಾರಗಳ ಆಯೋಜನೆಯ ಮೂಲಕ ಅವರು ನೀಡಿದ ಕೊಡುಗೆ ಸದಾಸ್ಮರಣೀಯ. ಯಕ್ಷಗಾನ ಕೃತಿಗಳಲ್ಲಿ ನವಚಿಂತನೆಯನ್ನು ಗುಪ್ತಗಾಮಿನಿಯಾಗಿಸಿದವರು. ತುಳುಪ್ರಸಂಗಗಳಿಗೆ ಕನ್ನಡಕ್ಕಿಂತ ಕಡಿಮೆ ಇಲ್ಲದ ಘನತೆಯನ್ನು ನೀಡಿದವರು. ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ಯಕ್ಷಗಾನಕಲಾರಂಗ ನೀಡುವ ವಿದ್ವತ್ ಪ್ರಶಸ್ತಿಗೆ ಭಾಜನರಾಗಿದ್ದರು.
ಅಮೃತ ಸೋಮೇಶ್ವರರ ಬದುಕು-ಸಾಧನೆಯ ಕುರಿತು ಯಕ್ಷಗಾನ ಕಲಾರಂಗವು ವಿಚಾರಗೋಷ್ಠಿಯನ್ನು ಆಯೋಜಿಸಿತ್ತು. ಸಂಸ್ಥೆಯು ಕಲೆ, ಕಲಾವಿದರು, ವಿದ್ಯಾರ್ಥಿಗಳಿಗಾಗಿ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಅಪಾರ ಆದರಾಭಿಮಾನವನ್ನು ಹೊಂದಿದ್ದ ಇವರು ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.