Home Uncategorized ತುಂಬೆ ವೆಂಟೆಡ್ ಡ್ಯಾಮ್‌ನಿಂದಾಗಿ ಕೃಷಿ ಭೂಮಿ ಮುಳುಗಡೆ: ರೈತರ ಮುತ್ತಿಗೆ, ಪರಿಹಾರಕ್ಕಾಗಿ ಆಗ್ರಹ

ತುಂಬೆ ವೆಂಟೆಡ್ ಡ್ಯಾಮ್‌ನಿಂದಾಗಿ ಕೃಷಿ ಭೂಮಿ ಮುಳುಗಡೆ: ರೈತರ ಮುತ್ತಿಗೆ, ಪರಿಹಾರಕ್ಕಾಗಿ ಆಗ್ರಹ

33
0

ಮಂಗಳೂರು: ಮಂಗಳೂರು ನಗರಕ್ಕೆ ನೀರು ಒದಗಿಸುವ ತುಂಬೆ ವೆಂಟೆಡ್ ಡ್ಯಾಮ್ ನೀರಿನಿಂದ ಕೃಷಿ ಭೂಮಿ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ರೈತರು ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಡ್ಯಾಂನ ಗೇಟ್‌ಗೆ ಬೀಗ ಹಾಕಿ ಗೇಟ್ ಬಳಿಯೇ ರೈತರನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಪೊಲೀಸರು ಹಾಗೂ ರೈತರ ನಡುವೆ ತಲ್ಲಾಟ ಕೂಡಾ ನಡೆಯಿತು.

ಧರಣಿ ಕುಳಿತ ರೈತರು ಪಾಲಿಕೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನದಿ ಕೊರೆತದಿಂದ ಕೃಷಿ ಭೂಮಿ ನಾಶಗೊಂಡಿರುವ ಹಿನ್ನೆಲೆಯಲ್ಲಿ ಅನೇಕ ಬಾರಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿ ಪರಿಹಾರಕ್ಕಾಗಿ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು.

ರೈತರು ಮುತ್ತಿಗೆ ಹಾಕುತ್ತಾರೆ ಎಂಬ ಮಾಹಿತಿ ಮೇರೆಗೆ ಡ್ಯಾಮ್ ಸುತ್ತಮುತ್ತ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದರು.

ಎಕರೆ ಗಟ್ಟಲೆ ಕೃಷಿ ಭೂಮಿನಾಶ: ಇಡೀ ಮಂಗಳೂರಿಗೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್ ನಿಂದ ಹೊರ ಹೊಮ್ಮುವ ನೀರಿನಿಂದ ನದಿಯ ಎರಡು ಭಾಗದಲ್ಲಿ ಎಕರೆಗಟ್ಟೆಲೆ ಕೊರೆತ ಉಂಟಾಗಿ, ಕೃಷಿ ಭೂಮಿ ನೀರುಪಾಲು ಆಗಿದೆ.

ಇದೀಗ ಇದೆ ಡ್ಯಾಮ್ ನಿಂದ ಹೊರ ಬರುವ ನೀರಿನ ರಭಸದಿಂದಾಗಿ ಕೃಷಿಕರು ಕಂಗಾಲು ಅಗಿದ್ದಾರೆ .

ಡ್ಯಾಮ್ ಸುತ್ತಮುತ್ತ ಸಮರ್ಪಕ ತಡೆಗೋಡೆ ನಿರ್ಮಿಸದೇ ನಿರ್ಲಕ್ಷ್ಯ ಮಾಡಿರುವುದೇ ಇದಕ್ಕೆ ಕಾರಣವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಆಗಮಿಸಿ ರೈತರ ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದರು.

ಅಡಿಕೆ, ತೆಂಗು, ಬಾಳೆಗಿಡ, ಕಾಳು ಮೆಣಸು ಮುಂತಾದ ಬೆಳೆಗಳು ನಾಶವಾಗಿದೆ. ಕೃಷಿಯನ್ನೇ ನಂಬಿಕೊಂಡ ಆನೇಕ ಕುಟುಂಬಗಳು ತೊಂದರೆ ಅನುಭವಿಸಿದ್ದಾರೆ. ಹಲವು ವರ್ಷದ ಬೇಡಿಕೆಗೆ ಸ್ಪಂದನೆ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಇದಿನಬ್ಬ ನಂದಾವರ,ಸುದೇಶ್ ಮಯ್ಯ , ಭಾಸ್ಕರ , ಲೋಕಯ್ಯ, ಆಮ್ ಆದ್ಮಿ ಪಕ್ಷದ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶುಕುಮಾರ್, ಬಂಟ್ವಾಳ ತಹಶೀಲ್ದಾರ್ ಬಿ.ಎಸ್.ಕೂಡಲಗಿ, ಮಂಗಳೂರು ಮಹಾನಗರ ಪಾಲಿಕೆ ಕಾರ್ಯ ಪಾಲಿಕೆ ಇಂಜಿನಿಯರ್ ನರೇಶ್ ಶೆಣೈ ಬಂಟ್ವಾಳ ಉಪತಹಶೀಲ್ದಾರ್ ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕ ವಿಜಯ ಆರ್ ಮತ್ತಿತರರು ಉಪಸ್ಥಿತರಿದ್ದರು.

15 ದಿನದೊಳಗೆ ತಡೆಗೋಡೆ ಕಾಮಗಾರಿ ಪ್ರಾರಂಭ: ಆಯುಕ್ತ ಆನಂದ್ ಭರವಸೆ

ತುಂಬೆ ವೆಂಟೆಡ್ ಡ್ಯಾಮ್ ಬಳಿ ಪ್ರತಿಭಟನೆ ನಿರತ ರೈತರ ಬಳಿಗೆ ಮಧ್ಯಾಹ್ನ ಆಗಮಿಸಿದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿಎಲ್ ಅವರಲ್ಲಿ ತುಂಬೆ ವೆಂಟೆಡ್ ಡ್ಯಾಮ್‌ನ ನೀರಿನಿಂದಾಗಿ ಕೊಚ್ಚಿಹೋದ ಕೃಷಿ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು. ಮುಂದೆ ಯಾವುದೇ ರೀತಿಯಲ್ಲಿ ಕೃಷಿಕರ ಭೂಮಿಗೆ ಡ್ಯಾಮ್‌ನ ನೀರಿನಿಂದ ತೊಂದರೆಯಾಗದಂತೆ ನದಿಯ ಎರಡು ಕಡೆಗಳಲ್ಲೂ ತಡೆಗೋಡೆ ನಿರ್ಮಿಸಬೇಕು ಎಂದು ರೈತರು ಆಗ್ರಹಿಸಿದರು.

3 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭೂಮಿ ಕೊಚ್ಚಿ ಹೋಗದಂತೆ ತಡೆಗೋಡೆ ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ 15 ದಿನಗಳಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿಯನ್ನು ಆರಂಭಿಸಲಾಗುವುದು. ನದಿಕೊರೆತ ತಡೆಗಟ್ಟಲು ಶಾಶ್ವತ ಪರಿಹಾರ ಕಂಡುಕೊಳ್ಳಲಾಗವುದು ಎಂದು ಆಯುಕ್ತ ಆನಂದ್ ಭರವಸೆ ನೀಡಿದರು.

22 ಲಕ್ಷ ರೂ ಪರಿಹಾರ: ಡ್ಯಾಮ್‌ನಿಂದಾಗಿ 60 ಸೆಂಟ್ಸ್ ಕೃಷಿ ಭೂಮಿಯನ್ನು ಕಳೆದುಕೊಂಡಿರುವ ಸ್ಥಳೀಯ ಉದ್ದೋಟ್ಟು ನಿವಾಸಿ ಖತೀಜಮ್ಮ ಎಂಬವರಿಗೆ 22 ಲಕ್ಷ ರೂ. ಪರಿಹಾರವನ್ನು ಒಂದು ವಾರದಲ್ಲಿ ಪಾವತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಆಯುಕ್ತರು ಭರವಸೆ ನೀಡಿರುವುದಾಗಿ ರೈತ ಸಂಘದ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.

 

 

 

LEAVE A REPLY

Please enter your comment!
Please enter your name here