ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಚಾಲನೆಗೆ ಅರಮನೆ ನಗರಿ ಮೈಸೂರು ಸಜ್ಜಾಗುತ್ತಿದ್ದು, ಹಲವು ಕಾರ್ಯಕ್ರಮಗಳು ರೂಪುರೇಷಗೊಳ್ಳುತ್ತಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮರದ ಅಂಬಾರಿ ತಾಲೀಮು ಆರಂಭಗೊಂಡಿದೆ. ಉದ್ಘಾಟನೆ ವೇಳೆ ಪುಷ್ಪಾರ್ಚನೆಗೊಳ್ಳುವ ಚಾಮುಂಡೇಶ್ವರಿ ವಿಗ್ರಹ ಅರಮೆನೆಯಿಂದ ದೇವಾಲಯಕ್ಕೆ ಹಸ್ತಾಂತರಗೊಂಡಿದ್ದು, ರಾಜವಂಶಸ್ಥ ಯದುವೀರ್ ನಡೆಸುವ ದರ್ಬಾರ್ ಗೂ ರತ್ನಖಚಿತ ಸಿಂಹಾಸನ ಜೋಡೆಣೆಗೊಂಡಿದೆ.
ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರು ಸಜ್ಜಾಗುತ್ತಿದೆ. ಈ ಬಾರಿ ಸಾಂಪ್ರದಾಯಿಕ ಆಚರಣೆ ಆಗುತ್ತಿದ್ದು, ಹಲವು ಕಾರ್ಯಕ್ರಮಗಳು ದಸರೆಗೆ ಮೆರಗು ನೀಡಲಿವೆ. ಇದಕ್ಕಾಗಿ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಕಳೆದ ಒಂದು ತಿಂಗಳಿಂದಲೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆ ಹಲವು ತಾಲೀಮುಗಳ ಮೂಲಕ ಜಂಬೂಸವಾರಿಗೆ ಸಜ್ಜಾಗುತ್ತಿದ್ದು,
ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಿವೆ. ಸಂಜೆ ಅರಮನೆ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರೇನ್ ಮೂಲಕ ಕ್ಯಾಪ್ಟನ್ ಅಭಿಮನ್ಯು ಹೆಗಲಿಗೆ ಮರದ ಅಂಬಾರಿ ಹೊರಿಸಿ, ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಿದರು. ಅರಮನೆಯಿಂದ ಬನ್ನಿಮಂಟಪದವರೆಗೆ ಎಲ್ಲಾ 14 ಆನೆಗಳು ಗಾಂಭೀರ್ಯದ ಹೆಜ್ಜೆಹಾಕುವ ಮೂಲಕ ತಾಲೀಮನ್ನ ಯಶಸ್ವಿಗೊಳಿಸಿದವು.
ರಾಜವಂಶಸ್ಥರು ನಡೆಸುವ ಖಾಸಗಿ ದಸರಾಕ್ಕೂ ಅರಮೆನೆ ಕೂಡ ಸಿದ್ಧವಾಗುತ್ತಿದ್ದು, ಅಕ್ಟೋಬರ್ 15ರಂದೇ ದರ್ಬಾರ್ ನಡೆಸುವ ಮೂಲಕ ಖಾಸಗಿ ದಸರಾ ಆರಂಭವಾಗಲಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಡೆಸುವ ದರ್ಬಾರ್ ಗೆ ರತ್ನಖಚಿತ ಸಿಂಹಾಸನ ಸಿದ್ದಗೊಂಡಿದೆ. ಇಂದು ಮುಂಜಾನೆ ಅರಮನೆ ಖಜಾನೆಯಿಂದ ಸಿಂಹಾಸನದ ಬಿಡಿ ಭಾಗಗಳನ್ನು ತಂದು ದರ್ಬಾರ್ ಹಾಲ್ ನಲ್ಲಿ ಸಿಬ್ಬಂದಿಗಳು ಜೋಡಣೆ ಮಾಡಿದರು.
ದಸರಾ ಉದ್ಘಾಟನೆ ವೇಳೆಯಲ್ಲಿ ಬೆಳ್ಳಿ ರಥದಲ್ಲಿ ಅಲಂಕೃತಗೊಳ್ಳುವ ಚಾಮುಂಡೇಶ್ವರಿ ವಿಗ್ರಹ ಮೈಸೂರು ಅರಮನೆಯಿಂದ ಚಾಮುಂಡಿ ಬೆಟ್ಟದ ದೇಗುಲಕ್ಕೆ ಹಸ್ತಾಂತರಗೊಂಡಿದ್ದು, ಮುಂಜಾನೆ ಅರಮನೆ ಮತ್ತು ದೇವಸ್ಥಾನದ ಅಧಿಕಾರಿಗಳು ಪೂಜೆ ಸಲ್ಲಿಸಿ ಚಾಮುಂಡಿ ಬೆಟ್ಟಕ್ಕೆ ದೇವಿ ವಿಗ್ರಹವನ್ನು ಕೊಂಡೊಯ್ದಿದ್ದಾರೆ. ದಸರಾ ಉದ್ಘಾಟನೆ ವೇಳೆ ಹಾಗೂ ದಸರಾ ಜಂಬೂಸವಾರಿ ವೇಳೆಯಲ್ಲಿ ಅಂಬಾರಿಯಲ್ಲಿ ಇದೇ ವಿಗ್ರಹ ಅಲಂಕೃತಗೊಳ್ಳಲಿದೆ.
ಈ ಬಾರಿಯ ದಸರಾಗೆ ಚಲನಚಿತ್ರೋತ್ಸವ ವಿಶೇಷ ಮೆರಗು ನೀಡಲಿದ್ದು, ಹಾಸ್ಯ ಚಕ್ರವರ್ತಿ ನರಸಿಂಹರಾಜು ನೆನಪಿನೊಂದಿಗೆ ಚಿತ್ರ ಪ್ರದರ್ಶನಗಳು ನಡೆಯಲಿವೆ. ಇದರ ಪೋಸ್ಟರ್ ಗಳನ್ನ ಸಮಿತಿಯ ವಿಶೇಷಾಧಿಕಾರಿಯಾಗಿರುವ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂಕೆ ಸವಿತಾ ಬಿಡುಗಡೆ ಮಾಡಿದರು. ಮೈಸೂರಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳುವ ಮೂಲಕ ಸಿನಿ ರಸಿಕರನ್ನ ರಂಜಿಸುವ ಮೂಲಕ ದಸರೆಗೆ ಮೆರಗು ನೀಡಲಿವೆ.
ಇದೆಲ್ಲದರ ನಡುವೆ ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಯುವಜನರನ್ನ ಆಕರ್ಷಿಸುತ್ತಿದೆ. ಒಟ್ಟಾರೆ ಅರಮನೆ ನಗರಿ ಮೈಸೂರು ಗತವೈಭವವನ್ನ ಧರೆಗೆ ತರಲು ಸಜ್ಜಾಗುತ್ತಿದ್ದು, ನಾಡಿನ ಜನತೆ ನವರಾತ್ರಿ ಸಂಭ್ರಮ ಕಂಣ್ತುಂಬಿಕೊಳ್ಳುವ ಕಾತುರದಲ್ಲಿದ್ದಾರೆ.
The post ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಅರಮನೆ ನಗರಿ: ಗಜಪಡೆಗೆ ಮರದ ಅಂಬಾರಿ ತಾಲೀಮು appeared first on Ain Live News.