ಮಂಗಳೂರು: ಜಲಜೀವನ್ ಮಿಷನ್ ಕಾಮಗಾರಿಯ ವಿಳಂಬ, ಅಪೂರ್ಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಚರ್ಚೆಯ ನಡುವೆ ಮಂಗಳೂರು ನಗರವನ್ನು ಕಾಡುತ್ತಿರುವ ನೀರಿನ ಸಮಸ್ಯೆಯೂ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.
ಸಂಸದ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಬುಧವಾರ ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ, ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಡ್ಯಾರ್ನಲ್ಲಿ ಡ್ಯಾಮ್ ಕಟ್ಟಲಾಗಿದೆ. ಪೈಪ್ಲೈನ್ ಹಾಕಲಾಗಿದೆ. ಆದರೆ ನೀರಿನ ಮೂಲ ಯಾವುದು ಎಂದು ಪ್ರಶ್ನಿಸಿದರು.
ಸರಿಯಾದ ಪ್ಲಾನೇ ಇಲ್ಲದೆ, ಮನಪಾದಿಂದ ಅನುಮತಿಯನ್ನೂ ಪಡೆಯದೆ ನೀರು ಸರಬರಾಜು ಮಾಡಲಾಗುತ್ತಿದೆ. ನಗರದ ಜನರೇ ಈಗಾಗಲೇ ನೀರಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಮಾಂತರ ಭಾಗಗಳಿಗೆ ಮಂಗಳೂರಿಗೆ ಪೂರೈಕೆಯಾಗುವ ಜಲಮೂಲದಿಂದ ನೀರು ಪೂರೈಕೆಯಾಗುತ್ತಿದೆ. ಪಾಲಿಕೆಗೆ ಒಂದು ರೂಪಾಯಿ ಕೂಡಾ ನೀಡುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೂಡಬಿದ್ರೆ ಹಾಗೂ ಉಳಾಯಿಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಶೇ. 80ರಷ್ಟು ಪೂರ್ಣಗೊಳಿಸ ಲಾಗಿದೆ. ಎಪ್ರಿಲ್ನೊಳಗೆ ಸಂಪೂರ್ಣಗೊಳ್ಳಲಿದೆ. ಇಳಂತಿಲ ಯೋಜನೆ ಶೇ. 30ರಷ್ಟು ಪೂರ್ಣಗೊಂಡಿದೆ ಎಂದು ಜಿ.ಪಂ. ಕಾರ್ಯನಿರ್ವಾಹಕ ಇಂಜಿನಿಯರ್ ಸಭೆಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ನೀರಿನ ಸಮಸ್ಯೆ ನಗರದಲ್ಲಿ ಕಾಣಿಸಿಕೊಂಡಿರುವುದರಿಂದ ಇದು ಇನ್ನಷ್ಟು ಕಾಡುವ ಸಾಧ್ಯತೆ ಇದೆ. ಹಾಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು, ಜಲಜೀವನ್ ಮಿಶನ್ನಡಿ ನೀರು ಪೂರೈಕೆಯನ್ನು ತುರ್ತುಗೊಳಿಸ ಬೇಕು ಎಂದು ಸಂಸದ ನಳಿನ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಜಲಜೀವನ್ ಮಿಶನ್ ಯೋಜನೆಯಡಿ 90000 ಮನೆಗಳಿಗೆ ಪೈಪ್ಲೈನ್ ಸಂಪರ್ಕ ಒದಗಿಸಬೇಕಾಗಿದ್ದು, ಈಗಾಗಲೇ ಸುಮಾರು 50,000 ಮನೆಗಳ ಸಂಪರ್ಕ ಪೂರ್ಣಗೊಂಡಿದೆ. ಇನ್ನೂ ಸುಮಾರು 40 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕರಾಗಿಳು ಮಾಹಿತಿ ನೀಡಿದರು.
ಸುಬ್ರಹ್ಮಣ್ಯ- ಪುತ್ತೂರು ವಿದ್ಯುದೀಕರಣ
ಸುಬ್ರಹ್ಮಣ್ಯದಿಂದ ಪುತ್ತೂರುವರೆಗಿನ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಮುಗಿಯುತ್ತಾ ಬಂದಿದೆ. ವಯರಿಂಗ್ ನಡೆಯುತ್ತಿದೆ. ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕಾಮಗಾರಿ ಪ್ರಗತಿಯಲ್ಲಿದೆ. ಪುತ್ತೂರಿನ ವಿವೇಕಾನಂದ ಕಾಲೇಜು ಬಳಿಯ ರೈಲ್ವೆ ಸೇತುವೆಯ ಅಗಲೀಕರಣದ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದೆ. ಬಂಟ್ವಾಳದ ಫ್ಲಾಟ್ಫಾರಂ ವಿದ್ಯುದ್ದೀಕರಣ ಕಾಮಗಾರಿ ನಡೆಯುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಉಳ್ಳಾಲ ಹಾಗೂ ತೊಕ್ಕೊಟ್ಟು ರೈಲ್ವೇ ಹಳಿ ದಾಟುವ ಪ್ರದೇಶಗಳಲ್ಲಿ ಸಾಕಷ್ಟು ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆ ಯಲ್ಲಿ ಪಾಲಕ್ಕಾಡ್ನ ಡಿಆರ್ಎಂ ಅವರು ಈ ಜಾಗವನ್ನು ಬಂದ್ ಮಾಡುವಂತೆ ತಿಳಿಸಿರುವಂತೆ ಕ್ರಮ ವಹಿಸಲಾಗಿದೆ ಎಂದು ಸಭೆಯಲ್ಲಿ ಪಾಲಕ್ಕಾಡ್ ವಿಭಾಗದ ರೈಲ್ವೇ ಅಧಿಕಾರಿ ಮಾಹಿತಿ ನೀಡಿದರು.
ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಪ್ರಸ್ತಾವವೇ ಇಲ್ಲದೆ ಏಕಾಏಕಿಯಾಗಿ ಮುಚ್ಚುವ ಮೂಲಕ ಸ್ಥಳೀಯರಿಂದ ಪ್ರತಿಭಟನೆಗೆ ಅವಕಾಶ ಕಲ್ಪಿಸಿದ್ದು ಯಾಕೆ? ಈ ಬಗ್ಗೆ ಸಂಬಂಧಪಟ್ಟವರ ಜತೆ ಯಾಕೆ ಚರ್ಚಿಸಿ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರೈಲ್ವೇ ಅಧಿಕಾರಿಗಳನ್ನು ಪ್ರಶ್ನಿಸಿದರು.
ಸೂಕ್ತ ವ್ಯವಸ್ಥೆ ಆಗುವವರೆಗೆ ಜನರು ವಿರೋಧ ವ್ಯಕ್ತಪಡಿಸಿರುವ ಜಾಗದಲ್ಲಿ ಬಂದ್ ತೆರವುಗೊಳಿಸುವಂತೆ ಸಂಸದ ನಳಿನ್ ಹೇಳಿದರಲ್ಲದೆ, ಈ ಬಗ್ಗೆ ಡಿಆರ್ಎಂ ಜತೆ ಮಾತನಾಡುವುದಾಗಿ ತಿಳಿಸಿದರು.
ಪಿಎಂ ವಿಶ್ವ ಕರ್ಮ ಯೋಜನೆ ಗುರಿ ಸಾಧನೆಗೆ ಸೂಚನೆ
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕುರಿತು ಜಿಲ್ಲಾ ಕೈಗಾರಿಕೆಗಳ ಜಂಟಿ ನಿರ್ದೇಶಕ ಗೋಕುಲದಾಸ್ ಮಾಹಿತಿ ನೀಡಿ ಈಗಾಗಲೇ 14,455 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸರ್ವರ್ ಸಮಸ್ಯೆ ಯಿಂದಾಗಿ ದಾಖಲಾತಿಯಲ್ಲಿ ವಿಳಂಬವಾಗಿದೆ. ಫಲಾನುಭವಿಗಳ ಹೆಸರನ್ನು ನೋಂದಾಯಿಸಲು ವಿವಿಧ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
20,000 ನೋಂದಣಿಯ ಗುರಿಯನ್ನು ಮಾಸಾಂತ್ಯಕ್ಕೆ ಪೂರ್ಣಗೊಳಿಸುವಂತೆ ನಳಿನ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಕುಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ಬಿಎಸ್ಸೆನ್ನೆಲ್ಗೆ ಸೂಚನೆ
ಕುಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಯಾಗುವ ಸಂದರ್ಭ ಬಿಎಸ್ಎನ್ಎಲ್ ಟವರ್ಗಳಲ್ಲಿ ನೆಟ್ವರ್ಕ್ ಸಮಸ್ಯೆ ಉಂಟಾಗು ತ್ತಿದೆ. ಕೊಲ್ಲಮೊಗರು ಗ್ರಾಮದಲ್ಲಿಯೂ ಈ ಸಮಸ್ಯೆ ಇದೆ. ಸೂಕ್ತ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ತಿಳಿಸಿದರು.
ದ.ಕ. ಟೆಲಿಕಾಂ ಜಿಲ್ಲೆಗೆ 196 ಹೊಸ ಬ್ಯಾಟರಿಗಳು ಬಂದಿದ್ದು, ಈಗಾಗಲೇ ಕುಗ್ರಾಮಗಳ ಟವರ್ಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೊಲ್ಲಮೊಗ್ರು ಟವರ್ನ ಬ್ಯಾಟರಿಯನ್ನು ಬದಲಾಯಿಸುವಂತೆ ಸಂಸದರು ಈ ಸಂದರ್ಭ ಸೂಚನೆ ನೀಡಿದರು.
6ತಿಂಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಕಟ್ಟಡ ಕಾಮಗಾರಿ ಪೂರ್ಣ
ಮಂಗಳೂರು ತಾಲೂಕಿನ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ಪ್ಲಾಸ್ಟಿಕ್ ಪಾರ್ಕ್ನ ಕಟ್ಟಡ ಕಾಮಗಾರಿ ಆರು ತಿಂಗಳಲ್ಲಿ ಮುಕ್ತಾಯವಾಗಲಿದೆ. ಈಗಾಗಲೇ ಸುಮಾರು 40 ಸಂಸ್ಥೆಗಳಿಂದ ಇಲ್ಲಿ ಬೇಡಿಕೆ ಬಂದಿದೆ. ಆದರೆ ಪಾರ್ಕ್ನ ರಸ್ತೆ ಜಾಗದಲ್ಲಿ ಗಣಿ ಇಲಾಖೆಯ ಮರಳು ಶೇಖರಿಸಲಾಗಿರುವುದರಿಂದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅಧಿಕಾರಿ ಸಭೆಯಲ್ಲಿ ಸಂಸದರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕಳೆದ ಆಗಸ್ಟ್ನಲ್ಲಿ ಕೇಂದ್ರ ಸಚಿವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಗಣಿ ಇಲಾಖೆ 15 ದಿನಗಳಲ್ಲಿ ತೆರವು ಗೊಳಿಸುವುದಾಗಿ ತಿಳಿಸಿತ್ತು. ಈಗ ಮತ್ತೆ 15 ದಿನ ಎನ್ನಲಾಗುತ್ತಿದೆ ಎಂದು ಸಂಸದ ನಳಿನ್ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಧ್ಯ ಪ್ರವೇಶಿಸಿ, ಮುಂದಿನ ಮೂರು ದಿನಗಳಲ್ಲಿ ತೆರವುಮಾಡಿ ಕೊಡುವಂತೆ ಗಣಿ ಅಧಿಕಾರಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅರಣ್ಯ ಅಧಿಕಾರಿ ಆ್ಯಂಟನಿ ಎಸ್. ಮರಿಯಪ್ಪ, ಮನಪಾ ಆಯುಕ್ತ ಆನಂದ್ ಉಪಸ್ಥಿತರಿದ್ದರು.