ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಕೊಂದಿರುವ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಬಿದಲೂರು ಗ್ರಾಮದ ನಿವಾಸಿ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಕವನಾ ಎಂದು ಗುರುತಿಸಲಾಗಿದೆ. ಬೆಂಗಳೂರು: ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಕೊಂದಿರುವ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಂತ್ರಸ್ತೆಯನ್ನು ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಬಿದಲೂರು ಗ್ರಾಮದ ನಿವಾಸಿ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಕವನಾ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಮಂಜುನಾಥ್ ತನ್ನ ಮಗಳು ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆಂದು ತಿಳಿದ ನಂತರ ಕಂಗಾಲಾಗಿದ್ದನು ಮತ್ತು ಯುವಕ ಬೇರೆ ಜಾತಿಗೆ ಸೇರಿದವನು ಎಂದು ತಿಳಿದ ನಂತರ ಅವನ ಕೋಪ ಮತ್ತಷ್ಟು ತೀವ್ರಗೊಂಡಿತ್ತು.
ಮಂಜುನಾಥ್ ತನ್ನ ಸಂಬಂಧವನ್ನು ಮುಂದುವರಿಸದಂತೆ ಪುತ್ರಿ ಕವನಾಗೆ ಎಚ್ಚರಿಕೆ ನೀಡಿದ್ದ. ಆದರೆ, ಆಕೆ ತನ್ನ ತಂದೆಯ ಮಾತನ್ನು ಕೇಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ತಂದೆ-ಮಗಳಿಬ್ಬರ ನಡುವೆ ಈ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ಮಂಜುನಾಥ್ ಚಾಕುವಿನಿಂದ ಕವನಾಳ ಕುತ್ತಿಗೆ ಸೀಳಿ, ಆಕೆಯ ಕಾಲು ಮತ್ತು ಕೈಗಳಿಗೆ ಹಲವು ಬಾರಿ ಇರಿದಿದ್ದಾನೆ.
ಹತ್ಯೆಯ ನಂತರ ಆರೋಪಿ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಹೊಡೆದು ಕೊಂದ ತಂದೆ!
ಮೂಲಗಳ ಪ್ರಕಾರ, ಮಂಜುನಾಥ್ ಅವರ ಕಿರಿಯ ಮಗಳು ತಮ್ಮ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ಧ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಕಳೆದ ವಾರ, ಆಕೆ ಸರ್ಕಾರಿ ವೀಕ್ಷಣಾ ಮನೆಗೆ ಹೋಗಿದ್ದರು ಮತ್ತು ಏನೇ ಆದರೂ ತಾನು ತನ್ನ ಪ್ರಿಯಕರನನ್ನೇ ಮದುವೆಯಾಗುವುದಾಗಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆ ನಂತರ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ಆಘಾತವಾಗಿದೆ. ಕಳೆದ ತಿಂಗಳು ಕೋಲಾರ ಜಿಲ್ಲೆಯಲ್ಲಿ ವರದಿಯಾದ ಎರಡು ಮರ್ಯಾದಾ ಹತ್ಯೆಗಳ ಬೆನ್ನಲ್ಲೇ ಈ ಘಟನೆ ನಡೆದಿದೆ.
ಕೋಲಾರ ಹತ್ಯೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಪರಾಧಗಳು ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆ, ಸಾಮಾಜಿಕ ಪದ್ಧತಿಗಳು ಮತ್ತು ಕೀಳು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದರು.
ಇದನ್ನೂ ಓದಿ: ಅವಮಾನದ ಹೆಸರಿನಲ್ಲಿ ‘ಮರ್ಯಾದಾ ಹತ್ಯೆ’: ಈ ಹೇಸಿಗೆ ಕೃತ್ಯಕ್ಕೆ ಶಿಕ್ಷೆಯಿಲ್ಲವೇ; ಕಾನೂನು ಹೇಳುವುದೇನು?
ಮರ್ಯಾದಾ ಹತ್ಯೆಗಳ ವಿರುದ್ಧ ತಮ್ಮ ಸರ್ಕಾರವು ಕಾನೂನು ಕ್ರಮವನ್ನು ಪ್ರಾರಂಭಿಸುತ್ತದೆ ಮತ್ತು ಅಂತಹ ಪ್ರಕರಣಗಳ ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುತ್ತದೆ ಎಂದು ಅವರು ಭರವಸೆ ನೀಡಿದರು.