ಉಡುಪಿ: ಮುಸ್ಲಿಂ ಸಮುದಾಯದ ವಿರುದ್ಧ ಕೋಮು ಪ್ರಚೋದಕ ಹೇಳಿಕೆ ನೀಡಿ ಸಾರ್ವಜನಿಕರ ನಡುವೆ ದ್ವೇಷ ಬಿತ್ತುವ ಯತ್ನ ನಡೆಸಿದ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎಪಿಸಿಆರ್ ಕರ್ನಾಟಕ ಬಾಪ್ಟರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿಬೇಂಗ್ರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವಿಧಿಸಲಾಗಿರುವ ಹಿಜಾಬ್ ನಿಷೇಧವನ್ನು ಹಿಂಪಡೆಯುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಜನರ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುವ ಕುರಿತಾಗಿತ್ತು. ಈ ಹೇಳಿಕೆ ಯನ್ನು ಉಲ್ಲೇಖಿಸಿ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಕಾರುವ ಹೇಳಿಕೆ ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ರಾಜ್ಯದಲ್ಲಿ ಕೋಮು ದ್ವೇಷದ ಭಾಷಣ ಮಾಡಿ ಶಾಂತಿ ಸುವ್ಯವಸ್ಥೆ ಕದಡುವ ನಿರಂತರ ಪ್ರಯತ್ನದಲ್ಲಿದ್ದು ಈ ಮುಂಚೆಯೂ ಕೂಡ ಅವರ ಹಲವು ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಅವರು ಪೊಲೀಸ್ ಮಹಾನಿರ್ದೇಶಕ ರಿಗೆ ಮನವಿಯಲ್ಲಿ ತಿಳಿಸಿದ್ದಾರೆ.
ಇದೀಗ ಮತ್ತೊಮ್ಮೆ ಸಂವಿಧಾನ ಕೊಟ್ಟ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರದ ಕುರಿತು ಆಧಾರ ರಹಿತವಾಗಿ ಮಾತನಾಡುತ್ತ ಮುಸ್ಕಾನ್ ಎಂಬ ವಿದ್ಯಾರ್ಥಿನಿಯ ಕುರಿತು ಮಾನಹಾನಿಕಾರ ಹೇಳಿಕೆ ನೀಡಿದ್ದು, ಇಡೀ ಮುಸ್ಲಿಂ ಸಮುದಾಯ ಮತ್ತು ಮಹಿಳೆಯರ ಕುರಿತು ದ್ವೇಷ ಕಾರುವ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆಗಳನ್ನು ನೀಡಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ ಎಂದವರು ಹೇಳಿದ್ದಾರೆ.
ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿರುವ ಕಲ್ಲಡ್ಕ ಭಟ್, ಮುಸಲ್ಮಾನ್ ಹುಡುಗರು ಅಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರು ಮತಾಂತರ ಮಾಡುತ್ತಿದ್ದಾರೆ ಎಂದಿದ್ದಾರೆ. ಮುಸ್ಲಿಂ ಸಮಾಜ ದಲ್ಲಿ ಹುಡುಗಿಯರು ಇಲ್ಲವಾ. ಹಿಂದೂ ಹುಡುಗಿಯರನ್ನು ಯಾಕೆ ಟಾರ್ಗೆಟ್ ಮಾಡುತ್ತೀರಾ. ಮತಾಂತರ ಮಾಡಲು ಲವ್ ಜಿಹಾದ್ ಪ್ರಯತ್ನ ಗಳಾಗುತ್ತಿವೆ ಎಂದಿದ್ದಾರೆ. ಮುಸ್ಲಿಮರಿಗೆ ಈ ಹಿಂದೆ ತಲಾಕ್ ಹೇಳುವ ಅವಕಾಶ ಇತ್ತು. ಮೋದಿ ಸರಕಾರದಿಂದ ತ್ರಿವಳಿ ತಲಾಕ್ ಇಲ್ಲದಾಗಿದೆ. ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ ಸರ್ಕಾರ ಎಂದು ಹೇಳಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ ಎಂದು ಹುಸೇನ್ ಕೋಡಿಬೇಂಗ್ರೆ ತಿಳಿಸಿದ್ದಾರೆ.
ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ. ಈ ದೇಶವನ್ನು ಉಳಿಸಿಕೊಳ್ಳುವ ಮಹತ್ ಕಾರ್ಯ ಹಿಂದೂಗಳಿಂದ ಮಾತ್ರ ಸಾಧ್ಯ. ಮುಸ್ಲಿಂರಿಗೆ ಹಲವು ದೇಶಗಳು ಇವೆ. ಆದರೆ, ಹಿಂದೂಗಳಿಗೆ ಭಾರತ ಮಾತ್ರ ಇರೋದು. ಹಿಂದೂಗಳಿಗೆ ಬೇರೆ ಕಡೆ ಜಾಗ ಇಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕು. ನಮ್ಮ ದೇಶವನ್ನು ಉಳಿಸಬೇಕು ಎಂದು ಹೇಳಿ ಸಾರ್ವಜನಿಕರ ನಡುವೆ ಧಾರ್ಮಿಕ ಸಂಘರ್ಷ ಹುಟ್ಟು ಹಾಕಲು ಯತ್ನ ನಡೆಸಿದ್ದಾರೆ.
ಈ ಎಲ್ಲ ಹೇಳಿಕೆಗಳಲ್ಲಿ ಆಧಾರ ರಹಿತವಾಗಿ ಕಲ್ಲಡ್ಕ ಪ್ರಭಾಕರ ಭಟ್ ಇಡೀ ಮುಸ್ಲಿಂ ಸಮಯದಾಯದ ವಿರುದ್ಧ ಪ್ರಮುಖವಾಗಿ ಮಹಿಳೆಯರ ವಿರುದ್ಧ ದ್ವೇಷ ಭಾಷಣ ಮಾಡುತ್ತ ಜನರಲ್ಲಿ ಆತಂಕ ಸೃಷ್ಟಿಸುವ, ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದು ಅವರ ವಿರುದ್ಧ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೇಂದು ಎಪಿಸಿಆರ್ ಕರ್ನಾಟಕ ಚಾಫ್ಟರ್ ಆಗ್ರಹಿಸುತ್ತದೆ ಎಂದು ಹುಸೇನ್ ಕೋಡಿಬೇಂಗ್ರೆ ಮನವಿಯಲ್ಲಿ ಹೇಳಿದ್ದಾರೆ.