ಮುಂಬೈ : ಹಿರಿಯ ಟಿವಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಆರೋಪಿಯಾಗಿರುವ ನಕಲಿ ಟಿಆರ್ಪಿ ಪ್ರಕರಣವನ್ನು ಹಿಂದೆಗೆದುಕೊಳ್ಳಲು ಅನುಮತಿ ಕೋರಿ ಪೋಲಿಸರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸ್ಥಳೀಯ ನ್ಯಾಯಾಲಯವು ಗುರುವಾರ ದೂರುದಾರರಿಗೆ ನೋಟಿಸ್ ಹೊರಡಿಸಿದೆ.
ಕೆಲವು ಟಿವಿ ವಾಹಿನಿಗಳು ತಮ್ಮ ಕಾರ್ಯಕ್ರಮಗಳಿಗೆ ವೀಕ್ಷಕರ ಸಂಖ್ಯೆಯನ್ನು ನಿರ್ಧರಿಸುವ ಟಿಆರ್ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್)ನ್ನು ಅಕ್ರಮ ವಿಧಾನಗಳ ಮೂಲಕ ತಿರುಚಿವೆ ಎಂದು ಬ್ರಾಡ್ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಸಲ್ಲಿಸಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಲ್.ಎಸ್.ಪಾಧೆನ್ ಅವರು ಆದೇಶವನ್ನು ಹೊರಡಿಸುವ ಮುನ್ನ ದೂರುದಾರರನ್ನು ಆಲಿಸಲಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯು ಜ.18ರಂದು ನಡೆಯಲಿದೆ.
ಮುಂಬೈ ಕ್ರೈಂ ಬ್ರ್ಯಾಂಚ್ ನಕಲಿ ಟಿಆರ್ಪಿ ಪ್ರಕರಣವನ್ನು ಹಿಂದೆಗೆದುಕೊಳ್ಳಲು ಕೋರಿ ಕಳೆದ ತಿಂಗಳು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು.
ಮುಂಬೈ ಪೋಲಿಸರು ತಮ್ಮ ಪೂರಕ ದೋಷಾರೋಪ ಪಟ್ಟಿಯಲ್ಲಿ ಗೋಸ್ವಾಮಿಯವರನ್ನು ಓರ್ವ ಆರೋಪಿಯನ್ನಾಗಿ ಹೆಸರಿಸಿದ್ದರು. ಅವರು ಸಹಆರೋಪಿ ಬಾರ್ಕ್ನ ಮಾಜಿ ಸಿಇಒ ಪಾರ್ಥೊ ದಾಸಗುಪ್ತಾ ಜೊತೆ ಶಾಮೀಲಾಗಿ ಟಿಆರ್ಪಿಯನ್ನು ತಿರುಚಿದ್ದರು ಎಂದು ಪೋಲಿಸರು ಆರೋಪಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥ ಮತ್ತು ಇತರ ಎರಡು ವಾಹಿನಿಗಳ ಮಾಲಿಕರು ಸೇರಿದಂತೆ 12 ಜನರನ್ನು ಬಂಧಿಸಲಾಗಿತ್ತು.
ಮುಂಬೈ ಪೋಲಿಸರ ಎಫ್ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ವೂ ಅಕ್ರಮ ಹಣ ವರ್ಗಾವಣೆ ದೂರನ್ನು ದಾಖಲಿಸಿಕೊಂಡಿತ್ತು. ಆದರೆ ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಸಲ್ಲಿಸಿದ್ದ ತನ್ನ ದೋಷಾರೋಪ ಪಟ್ಟಿಯಲ್ಲಿ ಅದು ರಿಪಬ್ಲಿಕ್ ಟಿವಿ ವಿರುದ್ಧ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ತಿಳಿಸಿತ್ತು.