ಬೆಂಗಳೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. 2026-27ನೇ ಸಾಲಿಗೆ 4.40 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು, ರಾಜ್ಯದಲ್ಲಿ ದಾಖಲೆ ಗಾತ್ರದ ಬಜೆಟ್ ಮಂಡಿಸಿದ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.
ದೇವೇಗೌಡರಿಂದ ಹಣಕಾಸು ಸಚಿವನಾದೆ
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಇಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರೇ ತಾವು ದಾಖಲೆಯ ಬಜೆಟ್ ಮಂಡಿಸಿದ್ದೀರಿ, ತಮಗೆ ಅಭಿನಂದನೆಗಳು. ನೂರು ಕುರಿಗಳನ್ನು ಲೆಕ್ಕ ಹಾಕಲು ಬಾರದವ ಬಜೆಟ್ ಏನು ಮಂಡಿಸುತ್ತಾನೆ ಎಂದು ಆರಂಭದಲ್ಲಿ ನಿಂದಿಸಿದರು ಎಂದು ನೀವೇ ಹೇಳಿದ್ದಿರಿ, ದೇವೇಗೌಡರು ನಿಮ್ಮನ್ನು ಫೈನಾನ್ಸ್ ಮಿನಿಸ್ಟರ್ ಮಾಡಿದರಂತೆ, ಹೌದೇ ಎಂದು ಕೇಳಿದರು.
ಆಗ ಸದನದಲ್ಲಿ ಎದ್ದು ನಿಂತು ತಾವು ಮೊದಲ ಬಾರಿಗೆ ಹಣಕಾಸು ಸಚಿವನಾದ ಸಂದರ್ಭವನ್ನು ಸಿದ್ದರಾಮಯ್ಯ ವಿವರಿಸಿದರು. ದೇವೇಗೌಡರು ಮುಖ್ಯಮಂತ್ರಿಗಳಾದರು, ನಾನು ಕಂದಾಯ ಇಲಾಖೆ ಸಚಿವ ಸ್ಥಾನ ಕೇಳಿದೆ, ಆರ್ ಎಲ್ ಜಾಲಪ್ಪನವರ ಮೆಡಿಕಲ್ ಕಾಲೇಜು ಗೆಸ್ಟ್ ಹೌಸ್ ನಲ್ಲಿ ಮಂತ್ರಿಮಂಡಲ ರಚನೆಯಾಗಿದ್ದು. ನಾನು, ಪಿ.ಜಿ.ಆರ್.ಸಿಂಧ್ಯಾ, ಆರ್ ಎಲ್ ಜಾಲಪ್ಪ, ದೇವೇಗೌಡರು ಮಂತ್ರಿಮಂಡಲ ರಚನೆ ಮಾಡಿದೆವು. ನಾನು ರೆವೆನ್ಯೂ ಡಿಪಾರ್ಟ್ ಮೆಂಟ್ ಕೇಳಿದೆ.
ಆಗ ಜಾಲಪ್ಪನವರು ನನಗೆ ಕಂದಾಯ ಇಲಾಖೆ ಬೇಕು ಎಂದು ಕೇಳಿದರು. ಆಗ ದೇವೇಗೌಡರು ಜಾಲಪ್ಪನವರಿಗೆ ರೆವೆನ್ಯೂ ಇಲಾಖೆ ಕೊಟ್ಟರು. ನನಗೆ ಯಾವುದು ಕೊಡುತ್ತೀರಿ ಎಂದು ಕೇಳಿದಾಗ ಫೈನಾನ್ಸ್ ತಗೋ ಎಂದರು. ನಾನು ಅರ್ಥಶಾಸ್ತ್ರ ಓದಿಲ್ಲ, ನನಗೆ ಆರ್ಥಿಕ ಜ್ಞಾನ ಹೆಚ್ಚು ಇಲ್ಲ, ಫೈನಾನ್ಸ್ ಬೇಡ ಎಂದೆ. ಆಗ ದೇವೇಗೌಡರು, ಇಲ್ಲ ನನಗೆ ನಂಬಿಕಸ್ಥ ಬೇಕು, ಅದಕ್ಕಾಗಿ ನನಗೇ ಹಣಕಾಸು ಇಲಾಖೆ ತಗೋಬೇಕು ಎಂದರು. ಅವರು ಬಲತ್ಕಾರ ಮಾಡಿ ನನಗೆ ಕೊಟ್ಟರು ಎಂದರು.
ಅಂದು ದೇವೇಗೌಡರಿಗೆ ದೂರದೃಷ್ಟಿ ಇತ್ತೇನೋ ಗೊತ್ತಿಲ್ಲ, ಅವರಿಂದಾಗಿ ಇವತ್ತು ನೀವು 17ನೇ ಬಜೆಟ್ ಮಂಡಿಸುವಂತಾಯಿತೇನೋ ಎಂದರು. ದೇವೇಗೌಡರಿಂದಾಗಿಯೇ ಇಂದು ನಾನು ದಾಖಲೆ ಬಜೆಟ್ ಮಂಡಿಸುವಂತಾಯಿತು ಎಂದು ಸಿದ್ದರಾಮಯ್ಯನವರು ಕೂಡ ಅಶೋಕ್ ಮಾತನ್ನು ಒಪ್ಪಿಕೊಂಡರು.
