ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ಪಕ್ಷ ಹೇಳಿದ್ದೇ ನಮಗೆ ವೇದ ವಾಕ್ಯ. ನನ್ನ ಮನೆ, ಸಿದ್ದರಾಮಯ್ಯನವರ ಮನೆ ಎಂದು ಸುತ್ತಾಡೋದನ್ನು ಬಿಡಿ ಎಂದು ನಾಯಕರಿಗೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ. ಬೆಂಗಳೂರು: ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ಪಕ್ಷ ಹೇಳಿದ್ದೇ ನಮಗೆ ವೇದ ವಾಕ್ಯ. ನನ್ನ ಮನೆ, ಸಿದ್ದರಾಮಯ್ಯನವರ ಮನೆ ಎಂದು ಸುತ್ತಾಡೋದನ್ನು ಬಿಡಿ ಎಂದು ನಾಯಕರಿಗೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ತ್ಯಾಗವನ್ನು ನಾವು ನೆನಪಿಟ್ಟುಕೊಳ್ಳಬೇಕು, ಗಾಂಧಿ ಕುಟುಂಬದ ತ್ಯಾಗವನ್ನು ನಾವು ಯಾವತ್ತೂ ಮರೆಯುವ ಹಾಗಿಲ್ಲ. ಅಂಥ ತ್ಯಾಗವನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ. ʻನನ್ನ ಮತ್ತು ಸಿದ್ದರಾಮಯ್ಯ ಅವರನ್ನು ಕೂರಿಸಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ನಮಗೆ ಖರ್ಗೆ ಮತ್ತು ಗಾಂಧಿ ಕುಟುಂಬದವರು ಏನು ಹೇಳಿದ್ದಾರೋ ಅದೇ ವೇದ ವಾಕ್ಯ. ಇಲ್ಲಿ ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ನಾವು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ನಮಗೆ 135 ಸ್ಥಾನ ಬಂದಿರುವುದು ಸಂತಸ ತಂದಿಲ್ಲ. ನಾಯಕರು ನನ್ನ ಅಥವಾ ಸಿದ್ದರಾಮಯ್ಯ ಅವರ ಮನೆಗೆ ಬರಬೇಡಿ. ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ನಾವು ಉತ್ತಮವಾಗಿ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ʻನನ್ನ ಮನೆ, ಸಿದ್ದರಾಮಯ್ಯನವರ ಮನೆ ಎಂದು ಸುತ್ತಾಡೋದನ್ನು ಬಿಡಿ, ಇಲ್ಲಿ ಕೇಳಿದ್ದನ್ನು ಅಲ್ಲಿಗೆ, ಅಲ್ಲಿ ಕೇಳಿದ್ದನ್ನು ಇಲ್ಲಿ ಹೇಳುವುದನ್ನು ಬಿಡಿ. ಈ ಮೂಲಕ ಒಬ್ಬರ ವಿಷಯವನ್ನು ಇನ್ನೊಬ್ಬರ ಬಳಿ ಹೇಳಿ ಜಗಳಕ್ಕೆ ಕಾರಣವಾಗುವ ಚಾಳಿಯನ್ನು ಬಿಡಬೇಕು, ಪಕ್ಷ ಕಟ್ಟುವ ಕೆಲಸ ಮಾಡಬೇಕು. ತಾಳ್ಮೆಯಿಂದಿರಿ.. ಎಲ್ಲರಿಗೂ ಅಧಿಕಾರ ಸಿಗುತ್ತದೆ. ನಮಗೆಲ್ಲರಿಗೂ ಈಗ 2024ರ ಚುನಾವಣೆಯೇ ಮುಖ್ಯ. ಈಗ ಅಧಿಕಾರದ ವಿಚಾರ ಬಿಡಿ, ಮೊದಲು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಲುವ ಕೆಲಸ ಮಾಡೋಣ ಎಂದರು.
ʻನನಗೆ ಮತ್ತು ಸಿದ್ದರಾಮಯ್ಯ ಅವರಿಗೆ ಅಧಿಕಾರ ಮುಖ್ಯವಲ್ಲ. ಜನರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಚಾಮುಂಡೇಶ್ವರಿ ತಾಯಿಯ ಮುಂದೆ ಶಕ್ತಿ ಕೊಡಿ ಎಂದು ಬೇಡಿದ್ದೇವೆ. ಒಳ್ಳೆಯ ಸಮಯದಲ್ಲಿ ಸರ್ಕಾರ ರಚನೆ ಆಗಿದೆ. ಚುನಾವಣೆಗೆ ಮುನ್ನ ನೀಡಿದ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಷರತ್ತುಗಳನ್ನು ಮುಂದಿನ ಸಂಪುಟ ಸಭೆ ವೇಳೆಗೆ ನಿರ್ಧಾರ ಮಾಡುತ್ತೇವೆ.
ನಮ್ಮ ಮತ್ತು ಗಾಂಧಿ ಕುಟುಂಬದ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ರಾಜೀವ್ ಗಾಂಧಿ ಅವರು ಪ್ರಾಣ ಕಳೆದುಕೊಂಡ ಚೆನ್ನೈನ ಶ್ರೀಪೆರಂಬದೂರಿನ ಜಾಗದಲ್ಲಿ ನಡೆಯುವ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಸುಮಾರು 20 ವರ್ಷ ಹೋಗಿದ್ದೇನೆ. ಅವರು ಮೃತಪಟ್ಟ ಸ್ಥಳದಲ್ಲಿ ಈಗಲೂ ಡಿಕೆ ಸುರೇಶ್ ಅವರ ಕಲ್ಲು ಕ್ವಾರಿ ಇದೆ ಎಂದು ಹೇಳಿದರು.