ಬೆಂಗಳೂರು: ನನಗೆ ಯಾವುದೇ ರೀತಿ ‘ಸಿದ್ದ ಎಕನಾಮಿಕ್ಸ್’ ಗೊತ್ತಿಲ್ಲ. ಆದರೆ, ಶ್ರೀಮಂತರಿಂದ ತೆರಿಗೆಯನ್ನು ಕಾನೂನು ರೀತಿಯಲ್ಲಿ ಸಂಗ್ರಹಿಸಿ, ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವ ಗುಡ್(ಒಳ್ಳೆಯ) ಎಕನಾಮಿಕ್ಸ್ ಮಾತ್ರ ಗೊತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ‘ಸಿದ್ದ ಎಕನಾಮಿಕ್ಸ್’ ಹೇಳಿಕೆ ಪ್ರಸ್ತಾಪಿಸಿದ ಅವರು, ‘ಸಿದ್ದ ಎಕನಾಮಿಕ್ಸ್’ ಎನ್ನುವ ಪದ, ಪುಸ್ತಕವನ್ನು ಯಾರಾದರೂ ನೋಡಿದ್ದೀರಾ? ಅಥವಾ ಓದಿದ್ದೀರಾ?. ಇಂತಹ ಪದ ನಾನಂತೂ ಎಲ್ಲೂ ಕೇಳಿಲ್ಲ. ನಾನು ಒಳ್ಳೆಯ ಎಕನಾಮಿಕ್ಸ್(ಆರ್ಥಿಕತೆ)ನಲ್ಲಿ ನಂಬಿಕೆ ಇಟ್ಟವನು ಎಂದು ಹೇಳಿದರು.
ಇನ್ನೂ, ಬಿಜೆಪಿ ಸರಕಾರದ್ದು 2019ರಿಂದ 2023ರ ವರೆಗೆ ದ್ವೇಷ ತುಂಬಿದ, ತುಕ್ಕು ಹಿಡಿದ ಬಸ್ಸು ಮುಂದಕ್ಕೆ ಹೋಗಲೇ ಇಲ್ಲ. ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು ಎಂದು ವ್ಯಂಗ್ಯವಾಡಿದ ರು. ನಮ್ಮ ಸರಕಾರದ ಅವಧಿಯಲ್ಲಿ ಬಿಜೆಪಿ ಸರಕಾರ ಕ್ಕಿಂತಲೂ ಹೆಚ್ಚಿನ ಹಾಲು ಉತ್ಪಾದನೆಯಾಗಿದೆ. 2023-24ರಲ್ಲಿ 84.41 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗಿದೆ ಎಂದು ವಿವರಿಸಿದರು.