Home Uncategorized ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಶ್ರಮಿಸಿ: ಕಾರ್ಯಕರ್ತರಿಗೆ ಸಂಸದ ರಾಘವೇಂದ್ರ ಕರೆ

ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಶ್ರಮಿಸಿ: ಕಾರ್ಯಕರ್ತರಿಗೆ ಸಂಸದ ರಾಘವೇಂದ್ರ ಕರೆ

21
0

ಕುಂದಾಪುರ, ಜ.8: ರಾಜಕೀಯ ಕ್ಷೇತ್ರದಲ್ಲಿ ಕಾರ್ಯಕರ್ತರ ನಡೆ ನುಡಿಯನ್ನು, ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ಕೆಲ ತಿಂಗಳು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹೆಚ್ಚಿನ ಬೆಂಬಲದೊಂದಿಗೆ ಮತ್ತೊಮ್ಮೆ ಮೋದಿಯವರನ್ನುವ ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸಮೃದ್ಧ ಬೈಂದೂರು-ಸಮರ್ಥ ಭಾರತ ಬೈಂದೂರು ತಾಲೂಕು ಇದರ ವತಿಯಿಂದ ಹೆಮ್ಮಾಡಿಯ ಜಯಶ್ರೀ ಸಭಾಂಗಣ ದಲ್ಲಿ ಸೋಮವಾರ ಜರಗಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಡೀ ದೇಶದ ವಾತಾವರಣ ನೋಡಿದರೆ ಸುಮಾರು 400ಕ್ಕಿಂತಲೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಗೆಲ್ಲುವ ಸಾಧ್ಯತೆ ಇದೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ 400 ಲೋಕಸಭಾ ಕ್ಷೇತ್ರ ಇಂದು 46 ಕ್ಷೇತ್ರಕ್ಕೆ ಸೀಮಿತಗೊಂಡು ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನ ಕೂಡ ಇಲ್ಲದ ಸ್ಥಿತಿಗೆ ಬಂದು ನಿಂತಿದೆ. ಜನರನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವಿದು ಎಂದು ಅವರು ಹೇಳಿದರು.

ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಾಲತಿ ನಾಯಕ್, ಬೈಂದೂರು ಕ್ಷೇತ್ರ ಉಪಾಧ್ಯಕ್ಷ ಸಾಮ್ರಾಟ್ ಶೆಟ್ಟಿ, ವಿನೋದ ಭಂಡಾರಿ, ಶೇಖರ ಖಾರ್ವಿ, ಶ್ಯಾಮಲಾ ಕುಂದರ್, ಪ್ರೇಮಾ ಸಿ.ಪೂಜಾರಿ, ಚಂದ್ರ ಜೋಗಿ, ಚಂದ್ರು ಮುಂತಾದವರು ಉಪಸ್ಥಿತರಿದ್ದರು.

ತಾಪಂ ಮಾಜಿ ಸದಸ್ಯ ಮಹೇಂದ್ರ ಪೂಜಾರಿ ಸ್ವಾಗತಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಬಿ.ಎಸ್.ಸುರೇಶ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here