ಹೊಸದಿಲ್ಲಿ: ಜನವರಿ 1 ರಿಂದ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಮೂಲಕ ವೇತನ ಪಡೆಯುವುದನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಸುಮಾರು 14.32 ಕೋಟಿ ಮಂದಿಯ ಪೈಕಿ 1.78 ಕೋಟಿ ಮಂದಿ ಉದ್ಯೋಗ ಪಡೆಯಲು ಅನರ್ಹರಾಗಿದ್ದಾರೆ ಎಂದು theprint.in ವರದಿ ಮಾಡಿದೆ.
ಕಳೆದ ಮೂರು ವರ್ಷಗಳಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಖಾತ್ರಿಪಡಿಸಲಾಗಿರುವ 100 ದಿನಗಳ ಉದ್ಯೋಗದ ಪೈಕಿ ಒಂದು ದಿನವಾದರೂ ಕೆಲಸ ಮಾಡಿರುವ ಪುರುಷ/ಮಹಿಳೆಯನ್ನು ಮಾತ್ರ ಸಕ್ರಿಯ ಉದ್ಯೋಗಿ ಎಂದು ಇನ್ನು ಮುಂದೆ ಪರಿಗಣಿಸಲಾಗುತ್ತದೆ.
ಎಂನರೇಗಾ ಪೋರ್ಟಲ್ ನಲ್ಲಿ ಜನವರಿ 1ರಂದು ಲಭ್ಯವಿರುವ ಮಾಹಿತಿಯ ಪ್ರಕಾರ, 1.78 ಕೋಟಿ ಸಕ್ರಿಯ ಕಾರ್ಮಿಕರು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಸಂಪರ್ಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.
ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಡಿ, ಯಾವುದೇ ಕಾರ್ಮಿಕನ ಆಧಾರ್ ಸಂಖ್ಯೆಯು ಆತನ/ಅವಳ ಎಂನರೇಗಾ ಉದ್ಯೋಗ ಚೀಟಿ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕಗೊಂಡಿದ್ದು, ಆ ಸಂಪರ್ಕವು ಭಾರತೀಯ ರಾಷ್ಟ್ರೀಯ ಪಾವತಿ ನಿಗಮದೊಂದಿಗೆ ಸಂಪರ್ಕ ಹೊಂದಿರಬೇಕಾಗುತ್ತದೆ. ಈ ಬಹು ಕೊಂಡಿಯ ಚಿಲ್ಲರೆ ಪಾವತಿ ಸಂಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 2008ರಲ್ಲಿ ಸ್ಥಾಪಿಸಿತ್ತು.
ಈ ನಡುವೆ, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಪಕ್ಷವು ಬಡವರ ವಿರೋಧಿ ನಿರ್ಧಾರ ಎಂದು ಟೀಕಿಸಿದೆ. ಎಪ್ರಿಲ್ 2022ರಿಂದ ಇಲ್ಲಿಯವರೆಗೆ ಎಂನರೇಗಾ ಪಟ್ಟಿಯಿಂದ ಹತ್ತಿರತ್ತಿರ 7.6 ಕೋಟಿ ಕಾರ್ಮಿಕರನ್ನು ಕೈಬಿಡಲಾಗಿದೆ ಎಂದು ಅದು ಆರೋಪಿಸಿದೆ.