ಬೆಂಗಳೂರು: ‘ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಲಿದ್ದಾರೆ ಎಂಬುದು ಕೇವಲ ವದಂತಿ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ರವಿವಾರ ಇಲ್ಲಿನ ಗೋವಿಂದರಾಜ ನಗರದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಈಗಾಗಲೇ ಬಿಜೆಪಿ ವರಿಷ್ಠರಿಗೆ ನನಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಸಿದ್ದೇನೆ. ಅವರು ಎರಡು ಬಾರಿ ನನ್ನನ್ನು ದಿಲ್ಲಿಗೆ ಕರೆದಿದ್ದರು. ಆದರೆ, ಕಾರಣಾಂತರಗಳಿಂದ ಹೋಗಿಲ್ಲ. ಇನ್ನು ಮುಂದೆ ನನ್ನ ಮೇಲೆ ಗದಾಪ್ರಹಾರ ನಡೆಯದಂತೆ ನೋಡಿಕೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಷಯ. ಮುಂದಿನ ಜ.10ರೊಳಗೆ ಎಲ್ಲ ಗೊಂದಲಗಳು ಬಗೆಹರಿಯಲಿವೆ ಎಂದರು.
ಒಂದು ವೇಳೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಪಕ್ಷದ ವರಿಷ್ಠರು ತೀರ್ಮಾನಿಸಿದರೆ ಅದಕ್ಕೆ ಬದ್ಧನಾಗಿದ್ದೇನೆ. ರಾಜಕೀಯ ನಿಂತ ನೀರಲ್ಲ. ದೊಡ್ಡವರ ಮಾತು ಕೇಳಿದೆ. ನೋವು ಮಾಡಿಕೊಂಡೆ. ನನ್ನ ಈ ಸ್ಥಿತಿಗೆ ಕಾರಣರಾದವರ ಜತೆ ವರಿಷ್ಠರು ಚರ್ಚೆ ಮಾಡಿ ಎಲ್ಲವನ್ನೂ ಬಗೆಹರಿಸಬೇಕು. ನಾನು ಯಾವುದೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿಲ್ಲ. ಲೋಕಸಭಾ ಟಿಕೆಟ್ ಕೇಳಿಲ್ಲ ಎಂದು ಅವರು ವಿವರಣೆ ನೀಡಿದರು.
ನಾನು ಚುನಾವಣೆಯಲ್ಲಿ ಸೋತರು ಜನಸಾಮಾನ್ಯರಿಗೆ ಸ್ಪಂದಿಸಿದ್ದೇನೆ. ಪ್ರಧಾನಿ ಮೋದಿ ಆಡಳಿತದಿಂದ ಭವ್ಯ ಭಾರತ ನಿರ್ಮಾಣವಾಗಲಿದೆ. ಈಗಾಗಲೇ ಕೋಟ್ಯಂತರ ಜನರ ಆಶಯದಂತೆ ರಾಮಮಂದಿರ ನಿರ್ಮಾಣವಾಗಿದೆ. ದೇಶ ಪ್ರಗತಿ ಸಾಧಿಸುತ್ತಿದೆ. ಇದರಿಂದಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮತ್ತೊಮ್ಮೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ಸೋಮಣ್ಣ ನುಡಿದರು.
‘ಯಾರೋ ನನಗೆ ಮಾಟ ಮಾಡಿಸಿರಬಹುದೇನೋ?, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಗೋವಿಂದರಾಜ ನಗರ ಕ್ಷೇತ್ರ ಬಿಡಬಾರದಿತ್ತು. ಆಗ ಯಾರಾದರೂ, ನನಗೆ ಮಾಟ ಮಂತ್ರ ಮಾಡಿಸಿದ್ದರೇನೋ?, ಜ.9ಕ್ಕೆ ದಿಲ್ಲಿಯಲ್ಲಿ ಪಕ್ಷದ ವರಿಷ್ಠರ ಭೇಟಿ ಆಗುತ್ತೇನೆ, ನನಗೆ ಆದ ಅನ್ಯಾಯವನ್ನ ವರಿಷ್ಠರ ಬಳಿ ಹೇಳುತ್ತೇನೆ’
-ವಿ.ಸೋಮಣ್ಣ ಮಾಜಿ ಸಚಿವ