ಹೊಸದಿಲ್ಲಿ : 2024ರ ಲೋಕಸಭಾ ಚುನಾವಣೆಗೆ ಸನ್ನಿಹಿತವಾಗುತ್ತಿರುವಂತೆಯೇ ಸಂಸತ್ ನ ಬಜೆಟ್ ಅಧಿವೇಶನವು ಬುಧವಾರ ಆರಂಭಗೊಳ್ಳಲಿದ್ದು, 17ನೇ ಲೋಕಸಭೆಯ ಅಂತಿಮ ಅಧಿವೇಶನ ಇದಾಗಲಿದೆ. ಉಪಸ್ಪೀಕರ್ ಇಲ್ಲದೆಯೇ ಲೋಕಸಭೆಯ ಅವಧಿಯು ಕೊನೆಗೊಂಡಿರುವುದು ಸಂಸದೀಯ ಇತಿಹಾಸದಲ್ಲೇ ಇದು ಮೊದಲ ಸಲವಾಗಿದೆ.
ಸಂಸತ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಬುಧವಾರ , ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ನೂತನ ಸಂಸತ್ ಭವನದಲ್ಲಿ ರಾಷ್ಟ್ರಪತಿ ಅವರು ಭಾಷಣ ಮಾಡುತ್ತಿರುವುದು ಇದೇ ಮೊದಲ ಸಲವಾಗಿದೆ.
ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಇದು ನಿರ್ಮಲಾ ಅವರು ಮಂಡಿಸಿರುವ ಆರನೇ ಬಜೆಟ್ ಆಗಿದೆ.
ಲೋಕಸಭಾ ಚುನಾವಣೆ ಎಪ್ರಿಲ್-ಮೇನಲ್ಲಿ ನಡೆಯಲಿರುವುದರಿಂದ, ವಿತ್ತ ಸಚಿವೆ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ರಚನೆಯಾಗಲಿರುವ ನೂತನ ಸರಕಾರವು ಪೂರ್ಣ ಪ್ರಮಾಣದ ಬಜೆಟನ್ನು ಮಂಡಿಸಲಿದೆ.
ಶುಕ್ರವಾರದಂದು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾರ್ಪಣೆಯ ಕುರಿತು ಚರ್ಚೆ ನಡೆಯಲಿದೆ. ಉಭಯಸದನಗಳಲ್ಲಿ ಪ್ರಧಾನಿ ಭಾಷಣದ ಬಳಿಕ, ಬಜೆಚ್ ಕುರಿತಂತೆ ಸಾಮಾನ್ಯ ಚರ್ಚೆ ನಡೆಯುವ ಸಾಧ್ಯತೆ ಇದೆ.
ಹಿಂದಿನ ಅಧಿವೇಶಗಳಂತೆ, ಬಜೆಟ್ ಅಧಿವೇಶನ ಕೂಡಾ ಆಡಳಿತಾರೂಢ ಎನ್ ಡಿ ಎ ಹಾಗೂ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಗಲಿದೆ. ಮಣಿಪುರ ಹಿಂಸಾಚಾರ, ನಿರುದ್ಯೋಗ ಬಿಕ್ಕಟ್ಟು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸರಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.