ಬೈಂದೂರು, ಜ.6: ನಿಂತಿದ್ದ ಲಾರಿಯ ಹಿಂಭಾಗಕ್ಕೆ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಂಭೀರ ಗಾಯದಿಂದ ಮೃತ ಪಟ್ಟ ಘಟನೆ ಶುಕ್ರವಾರ ಅಪರಾಹ್ನ ಪಡುವರಿ ಗ್ರಾಮದ ಒತ್ತಿನೆಣೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಕಾರಿನಲ್ಲಿ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಲಾವಣ್ಯ ಎಂದು ಗುರುತಿಸಲಾಗಿದೆ. ಅವರು ತಲೆಗಾದ ಗಂಭೀರ ಗಾಯದಿಂದ ಬೈಂದೂರು ಸರಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಕೊಚ್ಚಿಯಿಂದ ಸರಕು ತುಂಬಿಸಿಕೊಂಡು ಗೋವಾಕ್ಕೆ ಹೋಗುತಿದ್ದ ಲಾರಿಯನ್ನು ಚಾಲಕ ಮೂತ್ರ ವಿಸರ್ಜನೆಗೆಂದು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ. ಹಿಂದಿನಿಂದ ವೇಗವಾಗಿ ಬಂದ ಕಾರನ್ನು ಚಾಲಕ ಹೇಮಂತ್, ವೇಗ ನಿಯಂತ್ರಿಸಲಾಗದೇ ಲಾರಿಯ ಬಲಬದಿ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದ್ದ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.