ಕೈಥಾಲ್ (ಹರಿಯಾಣ): ವಂಚನೆ ಆರೋಪ ಹೊತ್ತಿರುವ ಸಬ್ ಇನ್ಸ್ಪೆಕ್ಟರ್’ನ್ನು ಅಮಾನತುಗೊಳಿಸುವಂತೆ ತಾವು ನೀಡಿದ ಸೂಚನೆಯನ್ನು ನಿರಾಕರಿಸಿದ ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಹರಿಯಾಣ ಸಚಿವ ಅನಿಲ್ ವಿಜ್ ತೀವ್ರವಾಗಿ ಕೆಂಡಾಮಂಡಲಗೊಂಡು ಕೂಗಾಡಿದ ಘಟನೆ ಶುಕ್ರವಾರ ನಡೆದಿದೆ.
ಕೈತಾಲ್ ಜಿಲ್ಲೆಯಲ್ಲಿ ಸಾರ್ವಜನಿಕ ಕುಂದುಕೊರತೆ ಪರಿಹಾರ ಸಮಿತಿ ಸಭೆ ನಡೆದಿದ್ದು, ಸಭೆಯ ವೇಳೆ ಭೂ ಖರೀದಿ ಪ್ರಕರಣದಲ್ಲಿ ಸಂದೀಪ್ ಎಂಬ ಸಬ್ ಇನ್ಸ್ಪೆಕ್ಟರ್ ವಂಚನೆ ಮಾಡಿದ್ದಾರೆಂದು ಆರೋಪಿಸಿದರು.
ಈ ವೇಳೆ ಸಚಿವ ಅನಿಲ್ ವಿಜ್ ಅವರು ಆರೋಪ ಹೊತ್ತಿರುವ ಸಬ್ ಇನ್ಸ್ಪೆಕ್ಟರ್ ಅನ್ನು ಅಮಾನತುಗೊಳಿಸುವಂತೆ ಸೂಚಿಸಿದರು.
ಆದರೆ, ಕೈಥಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಪಾಸನಾ ಅವರು, ಆ ಅಧಿಕಾರಿ ಕುರಕ್ಷೇತ್ರ ಜಿಲ್ಲೆಗೆ ಸೇರಿದ್ದು, ತಮ್ಮ ವ್ಯಾಪ್ತಿಗೆ ಬಾರದ ಕಾರಣ ಅಮಾನತು ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದರಿಂದ ಸಚಿವ ಮತ್ತು ಎಸ್ಪಿ ನಡುವೆ ಮಾತಿನ ಚಕಮಕಿ ನಡೆಯಿತು.
ಸಬ್ ಇನ್ಸ್ಪೆಕ್ಟರ್ ಅಮಾನತು ವಿಚಾರದಲ್ಲಿ ಸಚಿವ ಹಾಗೂ ಪೊಲೀಸ್ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆಯೊಂದು ಹರಿಯಾಣದಲ್ಲಿ ನಡೆದಿದೆ.
ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸಚಿವ ಅನಿಲ್ ವಿಜ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಉಪಾಸನಾ ನಡುವೆ ಮಾತಿನ ಚಕಮಕಿ ನಡೆದಿದ್ದು. ಈ ವೇಳೆ ಕೆಂಡಾಮಂಡಲಗೊಂಡಿರುವ ಸಚಿವರು ಅಧಿಕಾರ ಇಲ್ಲದಿದ್ದರೆ… pic.twitter.com/FmIudlt9kU
— kannadaprabha (@KannadaPrabha) February 14, 2026
“ನಾನು ಹೇಳುತ್ತಿದ್ದೇನೆ, ಅಮಾನತು ಮಾಡಿ,” ಎಂದು ಸಚಿವರು ಎಸ್ಪಿಗೆ ಸೂಚಿಸಿದರು. ಆದರೆ, ಎಸ್ಪಿ, ಅಮಾನತು ಅಧಿಕಾರ ಕುರಕ್ಷೇತ್ರ ಎಸ್ಪಿ ಅಥವಾ ಡಿಜಿಪಿಗೆ ಮಾತ್ರ ಇರುವುದಾಗಿ ತಿಳಿಸಿದರು. ಇದಕ್ಕೆ ಕೋಪಗೊಂಡ ಸಚಿವರು, “ನಿಮಗೆ ಅಧಿಕಾರ ಇಲ್ಲದಿದ್ದರೆ ಇಲ್ಲಿಂದ ಎದ್ದು ಹೊರ ಹೋಗಿ” ಎಂದು ಗುಡುಗಿದರು.
“ನಾನು ಆದೇಶಿಸಿದ್ದೇನೆ ಎಂದು ಡಿಜಿಪಿಗೆ ಪತ್ರ ಬರೆಯಿರಿ. ನನ್ನ ಆದೇಶವನ್ನು ಪಾಲಿಸಬೇಕು” ಎಂದು ವಿಜ್ ಅವರು ತಾಕೀತು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಪತ್ರ ಬರೆಯುತ್ತೇನೆ, ಆದರೆ ನೇರವಾಗಿ ಅಮಾನತು ಮಾಡಲಾರೆ ಎಂದು ಪ್ರತಿಕ್ರಿಯಿಸಿದರು. ಈ ಕುರಿತ ಸಚಿವರು ಹಾಗೂ ಪೊಲೀಸ್ ಅಧಿಕಾರಿಯ ಈ ಜಟಾಪಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.
ಸಭೆಯ ಬಳಿಕ ಮಾತನಾಡಿದ ಅನಿಲ್ ವಿಜ್ ಅವರು, “ಜನರಿಗೆ ನ್ಯಾಯ ಒದಗಿಸುವುದೇ ನಮ್ಮ ಗುರಿ. ನಾನು ನೇರವಾಗಿ ಅಮಾನತು ಮಾಡಲು ಹೇಳಿಲ್ಲ, ಅಧಿಕಾರ ಹೊಂದಿರುವವರಿಗೆ ಬರೆಯಲು ಸೂಚಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
