ಪುತ್ತೂರು: ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಹಕ್ಕುಪತ್ರ ವಿತರಣಾ ಸಮಾರಂಭ ಪುತ್ತೂರಿನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಅಕ್ರಮ ಸಕ್ರಮ ಮತ್ತು 94ಸಿ ಸೇರಿದಂತೆ ಒಟ್ಟು 460 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ಶಾಸಕರ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
187 ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಹಕ್ಕುಪತ್ರ ಹಾಗೂ 273 ಫಲಾನುಭವಿಗಳಿಗೆ ಅಕ್ರಮ ಸಕ್ರಮ ಹಕ್ಕುಪತ್ರಗಳನ್ನು ಇವತ್ತು ನೀಡಲಾಗುತ್ತಿದೆ. ದಕ್ಷಿಣಕನ್ನಡ, ಉಡುಪಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಎಲ್ಲೂ ಇಷ್ಟು ದೊಡ್ಡ ಪ್ರಮಾಣದ ಹಕ್ಕುಪತ್ರ ವಿತರಣೆ ಈ ಬಾರಿ ನಡೆದಿಲ್ಲ ಎಂದು ಹೇಳಿದ ಅವರು, ಇದು ನನ್ನ ಕನಸಿನ ಯೋಜನೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ನಾನು ಅಕ್ರಮ ಸಕ್ರಮ, 94ಸಿ ಹಕ್ಕುಪತ್ರಗಳನ್ನು ಯಾವುದೇ ಭ್ರಷ್ಟಾಚಾರವಿಲ್ಲದೆ ಬಡವರ ಮನೆ ಬಾಗಿಲಿಗೆ ಮುಟ್ಟಿಸುವುದಾಗಿ ಆಶ್ವಾಸನೆ ನೀಡಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ಈ ಮಂಜೂರಾತಿಯಲ್ಲಿ ಒಂದು ಪೈಸೆಯೂ ಲಂಚ ವ್ಯವಹಾರ ನಡೆದಿಲ್ಲ ಎಂದರು.
ವಿಟ್ಲ ಹೋಬಳಿಗೆ ಸಂಬಂಧಿಸಿ 260 ಕಡತಗಳು ತಯಾರಾಗಿವೆ. ಶೀಘ್ರದಲ್ಲೇ ವಿಟ್ಲದಲ್ಲಿ ಕಾರ್ಯಕ್ರಮ ಏರ್ಪಡಿಸಿ ಅವುಗಳನ್ನು ವಿತರಿಸಲಾಗುವುದು. ಇದಲ್ಲದೆ ಪುತ್ತೂರು ಕ್ಷೇತ್ರದಲ್ಲಿ ಇನ್ನೂ ಸಾವಿರಾರು ಅರ್ಜಿಗಳು ಬಾಕಿ ಇವೆ. 3 ಗ್ರಾಮಗಳಿಗೊಂದು ಕಾರ್ಯಕ್ರಮ ಮಾಡಿ ಮುಂದಿನ ದಿನಗಳಲ್ಲಿ ವಿತರಿಸಲಾಗುವುದು. ಏಳೆಂಟು ವರ್ಷಗಳಿಂದ ಬಾಕಿ ಇದ್ದ ಅರ್ಜಿಗಳನ್ನು ಕೂಡ ಈ ಬಾರಿ ವಿಲೇವಾರಿ ಮಾಡಲಾಗುತ್ತಿದೆ ಎಂದರು.
ನೂತನ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಮಾತನಾಡಿ, ಒರಿಸ್ಸಾ ಮೂಲದ ನಾನು ಬೆಂಗಳೂರಿಗೆ 10 ವರ್ಷಗಳ ಹಿಂದೆ ಬಂದು ಇಲ್ಲೇ ಐಎಎಸ್ ಮಾಡಿ ಕರ್ನಾಟಕವನ್ನೇ ಆರಿಸಿಕೊಂಡಿದ್ದೇನೆ. ಕನ್ನಡಿಗರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಬಡವರಿಗೆ ಅನ್ಯಾಯ ಆಗದಂತೆ ಸೇವೆ ಸಲ್ಲಿಸಲು ಬದ್ಧನಿದ್ದೇನೆ ಎಂದರು.
ತಹಸೀಲ್ದಾರ್ ಶಿವಶಂಕರ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವಾ ಉಪಸ್ಥಿತರಿದ್ದರು. ಕೃಷ್ಣ ಪ್ರಸಾದ್ ಆಳ್ವಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ 460 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.