ಹೈದರಾಬಾದ್ : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಗುರುವಾರ ಪತ್ರಕರ್ತ ಎನ್. ವೇಣುಗೋಪಾಲ್ ಅವರ ನಿವಾಸ ಸೇರಿದಂತೆ ಹೈದರಾಬಾದ್ ನ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ.
‘ವೀಕ್ಷಣಮ್’ ನಿಯತಕಾಲಿಕದ ಸಂಪಾದಕರಾಗಿರುವ ವೇಣುಗೋಪಾಲ್, ವರವರ ರಾವ್ ಅವರ ಅಳಿಯ.
2018ರಲ್ಲಿ ಪುಣೆ ಸಮೀಪದ ಭೀಮಾ ಕೋರೆಗಾಂವ್ನಲ್ಲಿ ಜಾತಿ ಹಿಂಸೆಗೆ ಪ್ರಚೋದನೆ ನೀಡಲು ಪಿತೂರಿ ನಡೆಸಿದ್ದಾರೆ ಎಂಬ ಆರೋಪದಲ್ಲಿ ವರವರರಾವ್ ಸೇರಿದಂತೆ 15 ಮಂದಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ವರವರರಾವ್ ಗೆ ವೈದ್ಯಕೀಯ ನೆಲೆಯಲ್ಲಿ 2022 ಆಗಸ್ಟ್ ನಲ್ಲಿ ಜಾಮೀನು ಸಿಕ್ಕಿದೆ.
ನಿಷೇಧಿತ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ದ ನಾಯಕ ಸಂಜಯ್ ದೀಪಕ್ ರಾವ್ ಜೊತೆಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಿ ವೇಣುಗೋಪಾಲ್ ಅವರ ನಿವಾಸದಲ್ಲಿ ಎನ್ಐಎ ಶೋಧ ನಡೆಸಿದೆ.
ಇದೇ ಆರೋಪದಲ್ಲಿ, ಹೋರಾಟಗಾರ ರವಿ ಶರ್ಮರ ನಿವಾಸದಲ್ಲೂ ಶೋಧ ನಡೆಸಲಾಗಿದೆ.
ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಸಂಜಯ್ ದೀಪಕ್ ರಾವ್ ನನ್ನು ಸೈಬರಾಬಾದ್ ಪೊಲೀಸ್ ನ ಗುಪ್ತಚರ ಇಲಾಖೆಯು ಸೆಪ್ಟೆಂಬರ್ ನಲ್ಲಿ ಬಂಧಿಸಿತ್ತು. ಅದಕ್ಕೂ ಮೊದಲು, ಮಹಾರಾಷ್ಟ್ರ ಸರಕಾರವು ಸಂಜಯ್ ದೀಪಕ್ ರಾವ್ ಬಗ್ಗೆ ಮಾಹಿತಿ ನೀಡುವವರಿಗೆ 25 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು.
ಎನ್ಐಎ ಫೋನ್ ವಶಪಡಿಸಿಕೊಂಡಿದೆ: ವೇಣುಗೋಪಾಲ್
ಎನ್ಐಎ ಅಧಿಕಾರಿಗಳು ನನ್ನ ಫೋನನ್ನು ವಶಪಡಿಸಿಕೊಂಡಿದ್ದಾರೆ ಎಂದು ಶೋಧದ ಬಳಿಕ ವೇಣುಗೋಪಾಲ್ ಹೇಳಿದರು.
‘‘ಇನ್ನೊಂದು ಪ್ರಕರಣದಲ್ಲಿ, ನನ್ನ ಫೋನನ್ನು ತನಿಖಾ ಸಂಸ್ಥೆಯೊಂದು ವಶಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ ಎಂದು ಹೇಳಿ ನನ್ನ ಫೋನ್ ವಶಪಡಿಸಿಕೊಳ್ಳುವುದನ್ನು ವಿರೋಧಿಸಿದೆ. ಆದರೂ ಎನ್ಐಎ ನನ್ನ ಫೋನನ್ನು ವಶಪಡಿಸಿಕೊಂಡಿದೆ’’ ಎಂದು ಅವರು ಹೇಳಿರುವುದಾಗಿ ‘ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
‘‘ಎಂಟು ಸದಸ್ಯರ ಎನ್ಐಎ ತಂಡವು ಮುಂಜಾನೆ 5 ಗಂಟೆಗೆ ಮನೆಗೆ ಬಂದು ಶೋಧ ವಾರಂಟ್ ತೋರಿಸಿದರು. ಆಗ ನಾನು ಅವರನ್ನು ಮನೆಯ ಒಳಗೆ ಬಿಟ್ಟೆ’’ ಎಂದು ವೇಣುಗೋಪಾಲ್ ಹೇಳಿದರು.