ಕೋಲ್ಕತಾ: ತೃಣಮೂಲ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ಸತ್ಯನ್ ಚೌಧುರಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಬೆಹ್ರಾಮ್ಪುರದಲ್ಲಿ ರವಿವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಸತ್ಯನ್ ಚೌಧುರಿ ಅವರು ಬೆಹ್ರಾಮ್ಪುರದ ಬಕುರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗಗನ ಚುಂಬಿ ಕಟ್ಟಡವನ್ನು ತನ್ನ ಕೆಲವು ನಿಕಟವರ್ತಿಗಳೊಂದಿಗೆ ಪರಿಶೀಲನೆ ನಡೆಸುತ್ತಿರುವ ಸಂದರ್ಭ ಎರಡು ಬೈಕ್ ಗಳಲ್ಲಿ ಆಗಮಿಸಿದ ಮೂವರು ಅಪರಿಚಿತ ಬಂದೂಕುಧಾರಿಗಳು ಮೂರು ಸುತ್ತು ಗುಂಡು ಹಾರಿಸಿದ್ದಾರೆ ಹಾಗೂ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಗುಂಡಿನ ದಾಳಿಯಿಂದ ಗಾಯಗೊಂಡ ಸತ್ಯನ್ ಚೌಧುರಿ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸತ್ಯನ್ ಚೌಧುರಿ ಅವರಿಗೆ ಅಪರಿಚಿತ ತಂಡವೊಂದು ತೀರಾ ಸಮೀಪದಿಂದ ಗುಂಡು ಹಾರಿಸಿದೆ ಎಂದು ಅವರ ಜೊತೆಗಿದ್ದವರು ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸತ್ಯನ್ ಚೌಧುರಿ ಅವರು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರ ಆಪ್ತ. ಆದರೂ ಅವರು ತಮ್ಮ ನಿಷ್ಠೆ ಬದಲಾಯಿಸಿ ತೃಣಮೂಲ ಕಾಂಗ್ರೆಸ್ ಸೇರಿದ್ದರು.