ಮುಂಬೈ: ನಟಿ ಅಂಜಲಿ ಪಾಟೀಲ್ ಅವರು ಸೈಬರ್ ವಂಚನೆಗೆ ರೂ 5.79 ಲಕ್ಷ ಕಳೆದುಕೊಂಡಿದ್ಧಾರೆ. ಮುಂಬೈ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಪರಿಚಯಿಸಿಕೊಂಡ ವಂಚಕ ತೈವಾನ್ನಲ್ಲಿ ನಟಿಯ ಪಾರ್ಸೆಲ್ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂದು ಹೇಳಿಕೊಂಡು ವಂಚಿಸಿದ್ದ. ಡಿ ಎನ್ ನಗರ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
ರಜನೀಕಾಂತ್ ಅವರ ʼಕಾಲಾʼ ಸಹಿತ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಂಜಲಿ ಮುಂಬೈಯ ಅಂಧೇರಿ ನಿವಾಸಿಯಾಗಿದ್ದಾರೆ. ಆಕೆಗೆ ದೀಪಕ್ ಶರ್ಮಾ ಎಂಬ ವ್ಯಕ್ತಿಯಿಂದ ಕರೆ ಬಂದಿತ್ತು. ತಾನು ́ಡೆಬ್ಎಕ್ಸ್́ ಕೊರಿಯರ್ ಕಂಪನಿಯ ಉದ್ಯೋಗಿ ಹಾಗೂ ಆಕೆಯ ಹೆಸರಿನ ಪಾರ್ಸೆಲ್ನಲ್ಲಿ ಡ್ರಗ್ಸ್ ಇದೆಯೆಂದು ಹೇಳಿದ್ದ. ತೈವಾನ್ಗೆ ರವಾನೆಯಾಗಬೇಕಿದ್ದ ಪಾರ್ಸೆಲ್ ಅನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ ಎಂದು ಆತ ಹೇಳಿ ಆಕೆಗೆ ಮುಂಬೈ ಸೈಬರ್ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದ.
ಇದರ ಬೆನ್ನಲ್ಲೇ ನಟಿಗೆ ತಾನು ಬ್ಯಾನರ್ಜಿ, ಮುಂಬೈ ಸೈಬರ್ ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿಯಿಂದ ಸ್ಕೈಪ್ ಕರೆ ಬಂದಿತ್ತು. ಆಕೆಯ ಆಧಾರ್ ಕಾರ್ಡ್ ಮೂರು ಬ್ಯಾಂಕ್ ಖಾತೆಗೆ ಜೋಡಿಸಲ್ಪಟ್ಟಿದೆ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಹೇಳಿಕೊಂಡು ಪರಿಶೀಲನೆ ಪ್ರಕ್ರಿಯೆಗೆ ರೂ 96,525 ಬೇಡಿಕೆಯಿರಿಸಿದ್ದ.
ಈ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆಂದು ಹೇಳಿಕೊಂಡು ಆಕೆಯಿಂದ ರೂ 4,83,291ಗೆ ಬೇಡಿಕೆಯಿರಿಸಿದ್ದ. ಪೊಲೀಸ್ ಕೇಸ್ ತಪ್ಪಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಅಂಜಲಿ ನಿರ್ಧರಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಆಕೆಗೆ ತಾನು ಸೈಬರ್ ವಂಚನಗೆ ಗುರಿಯಾಗಿರುವುದು ತಿಳಿದು ಬಂದು ದೂರು ದಾಖಲಿಸಿದ್ದರು.