ಹೊಸದಿಲ್ಲಿ: ಪೊಲೀಸ್ ಕಂಟ್ರೋಲ್ ರೂಮ್ (ಪಿಸಿಆರ್) ವಶಕ್ಕೆ ಪಡೆದಿದ್ದ ಲೈಂಗಿಕ ಕಿರುಕುಳ ಆರೋಪಿಯೊಬ್ಬ ಪೊಲೀಸ್ ವಾಹನದಿಂದ ಜಿಗಿದು ತೀವ್ರವಾಗಿ ಗಾಯಗೊಂಡ ಸಂದರ್ಭದಲ್ಲಿ ಆತನಿಗೆ ಚಿಕಿತ್ಸೆ ನೀಡಲು ನಾಲ್ಕು ಆಸ್ಪತ್ರೆಗಳು ನಿರಾಕರಿಸಿದ್ದರಿಂದ ಆತ ಪ್ರಾಣ ಬಿಟ್ಟ ಘಟನೆ ವರದಿಯಾಗಿದೆ. ವೈದ್ಯಕೀಯ ನೆರವಿಗಾಗಿ ಎಂಟು ಗಂಟೆ ಕಾಲ ಅಲೆದಾಡಿದರೂ ಚಿಕಿತ್ಸೆ ದೊರಕದೇ ಆರೋಪಿ ಮೃತಪಟ್ಟಿದ್ದಾನೆ.
ಸುಮಾರು 47 ವರ್ಷ ವಯಸ್ಸಿನ ಪ್ರಮೋದ್ ಎಂಬ ವ್ಯಕ್ತಿಯ ವಿರುದ್ಧ ಮಹಿಳೆಯೊಬ್ಬರು ನೀಡಿದ ಲೈಂಗಿಕ ಕಿರುಕುಳ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ಯುತ್ತಿದ್ದ ವೇಳೆ, ಈ ಪಾನಮತ್ತ ವ್ಯಕ್ತಿ ವಾಹನದಿಂದ ಜಿಗಿದಿದ್ದ ಎನ್ನಲಾಗಿದೆ.
ವಾಹನದಲ್ಲಿ ಪೊಲೀಸರು ಎದುರು ಕುಳಿದಿದ್ದ ಸಂದರ್ಭದಲ್ಲಿ ಹಿಂದೆ ಇದ್ದ ಆರೋಪಿ, ಕಿಟಕಿ ತೆಗೆದು ಕಾರಿನಿಂದ ಹೊರಕ್ಕೆ ಹಾರಿದ್ದಾನೆ. ರಸ್ತೆ ಮೇಲೆ ಬಿದ್ದ ಆತನಿಗೆ ಗಂಭೀರ ಗಾಯಗಳಾಗಿದ್ದವು. ಮಂಗಳವಾರ ರಾತ್ರಿ 9.03ಕ್ಕೆ ಹೊಸ ಉಸ್ಮಾನ್ ಪುರದ ಶಾಂತಿ ಮೊಹಲ್ಲಾ ಮಹಿಳೆಯೊಬ್ಬರು ಪಿಸಿಆರ್ಗೆ ಕರೆ ಮಾಡಿ, ವ್ಯಕ್ತಿಯ ವಿರುದ್ಧ ಅಸಭ್ಯ ವರ್ತನೆ, ನಿಂದನೆ ಮತ್ತು ಹಲ್ಲೆ ಮಾಡಿದ ಆರೋಪ ಹೊರಿಸಿ ದೂರು ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ, ಪ್ರಮೋದ್ನನ್ನು ಠಾಣೆಗೆ ಕರೆದೊಯ್ದಿದ್ದರು.
ಠಾಣೆಗೆ ಸನಿಹದಲ್ಲಿದ್ದಾಗ ಪಾನಮತ್ತನಾಗಿದ್ದ ಈತ ವಾಂತಿ ಮಾಡುವ ಸಲುವಾಗಿ ಕಿಟಕಿ ತೆರೆದು ರಸ್ತೆಗೆ ಹಾರಿದ ಎಂದು ಈಶಾನ್ಯ ವಲಯ ಡಿಸಿಪಿ ಜಾಯ್ ತಿರ್ಕೆ ಹೇಳಿದ್ದಾರೆ. ತಕ್ಷಣ ಆತನನ್ನು ಜಗ ಪರ್ವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತನನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ಮಾಡಲಾಯಿತು. ಅಲ್ಲಿ ಸಿಟಿ-ಸ್ಕ್ಯಾನ್ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ದಾಖಲಿಸಿಕೊಳ್ಳದೇ ಎಲ್ಎನ್ಜೆಪಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಐಸಿಯು ಬೆಡ್ ಲಭ್ಯತೆ ಇಲ್ಲದ ಕಾರಣ ದಾಖಲಿಸಿಕೊಳ್ಳದೇ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲೂ ಚಿಕಿತ್ಸೆ ನಿರಾಕರಿಸಿದಾಗ ಮೊದಲ ಆಸ್ಪತ್ರೆಗೆ ಕೊನೆಯ ಪ್ರಯತ್ನವಾಗಿ ಕರೆ ತರುತ್ತಿದ್ದಾಗ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.