Home Uncategorized ಪೋಸ್ಟ್ ಆಫೀಸ್ ಹಗರಣದ ಬಗ್ಗೆ ಸೂಕ್ತ ಕ್ರಮ: ರಿಷಿ ಸುನಕ್

ಪೋಸ್ಟ್ ಆಫೀಸ್ ಹಗರಣದ ಬಗ್ಗೆ ಸೂಕ್ತ ಕ್ರಮ: ರಿಷಿ ಸುನಕ್

40
0

ಲಂಡನ್: ಅನೇಕ ಬ್ರಿಟಿಷ್ ಭಾರತೀಯರ ಮೇಲೆ ಪ್ರಭಾವ ಬೀರಿದ್ದ ಪೋಸ್ಟ್ ಆಫೀಸ್ ಹಗರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ವಾಗ್ದಾನ ಮಾಡಿದ್ದಾರೆ.

1990ರ ದಶಕಾಂತ್ಯದಿಂದ 2015ರವರೆಗಿನ ಅವಧಿಯಲ್ಲಿ ಬ್ರಿಟನ್ ಅಂಚೆ ಇಲಾಖೆಯ ಲಕ್ಷಾಂತರ ಮೊತ್ತ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಆದರೆ ಅಂಚೆ ಇಲಾಖೆಯ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಆದ ದೋಷದಿಂದ ಈ ತಪ್ಪು ಮಾಹಿತಿ ಬಿಡುಗಡೆಯಾಗಿರುವುದು ಬಳಿಕ ತನಿಖೆಯಿಂದ ಬೆಳಕಿಗೆ ಬಂದಿತ್ತು. ಇಷ್ಟರಲ್ಲೇ 700ಕ್ಕೂ ಅಧಿಕ ಪೋಸ್ಟ್ ಮಾಸ್ಟರ್ ಗಳ ವಿರುದ್ಧ ಹಣಕದ್ದ ಅಪರಾಧ ಹೊರಿಸಿ ಶಿಕ್ಷೆ ವಿಧಿಸಲಾಗಿತ್ತು. ಇವರಲ್ಲಿ ಹೆಚ್ಚಿನವರು ಭಾರತೀಯ ಮೂಲದವರಾಗಿದ್ದರು.

ಹೀಗೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದವರಲ್ಲಿ ಕೆಲವರಿಗೆ ಸರಕಾರ ಪರಿಹಾರ ಮೊತ್ತವನ್ನು ಪಾವತಿಸಿತ್ತು. ಆದರೆ ಇನ್ನೂ ಹಲವರು ಪರಿಹಾರ ಮೊತ್ತಕ್ಕೆ ಕಾಯುತ್ತಿದ್ದು ಪರಿಹಾರ ಬಿಡುಗಡೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

‘ಇದು 90ರ ದಶಕದಲ್ಲಿ ನಡೆದಿರುವ ವಿಷಯವಾದರೂ ಸಂತ್ರಸ್ತರಲ್ಲಿ ಕೆಲವರು ಇನ್ನೂ ನ್ಯಾಯಕ್ಕಾಗಿ ಮತ್ತು ಪರಿಹಾರ ಪಡೆಯಲು ಕಾಯುತ್ತಿರುವುದು ನಿಜಕ್ಕೂ ವಿಷಾದನೀಯವಾಗಿದೆ. ಪ್ರತಿಯೊಬ್ಬರೂ ನ್ಯಾಯ ಪಡೆಯಲು ಅರ್ಹರಾಗಿದ್ದಾರೆ ಮತ್ತು ನ್ಯಾಯ ದೊರಕಿಸಿಕೊಡುವುದು ಸರಕಾರದ ಜವಾಬ್ದಾರಿಯಾಗಿದೆʼ ಎಂದು ಸುನಕ್ ಹೇಳಿದ್ದಾರೆ.

ಈಗಾಗಲೇ ಕೆಲವರಿಗೆ ಸರಕಾರ ಸುಮಾರು 150 ದಶಲಕ್ಷ ಪೌಂಡ್ ಮೊತ್ತದ ಪರಿಹಾರ ಪಾವತಿಸಿದೆ. ಉಳಿದವರಿಗೆ ಸಾಧ್ಯವಾದಷ್ಟು ಬೇಗ ಪರಿಹಾರ ತಲುಪಿಸಲು ಸರಕಾರ ಪ್ರಯತ್ನಿಸುತ್ತಿದೆ. ಕೆಲವರಿಗೆ ಮಧ್ಯಾಂತರ ಪರಿಹಾರ ನೀಡಲಾಗಿದೆ. ಮೂರು ವಿಧದಲ್ಲಿ ಪರಿಹಾರ ಒದಗಿಸುವ ಯೋಜನೆಯಿದೆ. ಸಂತ್ರಸ್ತರು ಮುಂದೆ ಬಂದು ಸರಕಾರವನ್ನು ಸಂಪರ್ಕಿಸಬಹುದು ಎಂದು ಸುನಾಕ್ ಹೇಳಿದ್ದಾರೆ.

ಈ ವಾರ ಬ್ರಿಟನ್ ನಲ್ಲಿ ಪ್ರಸಾರಗೊಂಡ ಟಿವಿ ಕಾರ್ಯಕ್ರಮ ಈ ಹಗರಣದ ವಿಷಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ನ್ಯಾಯಾಲಯದಲ್ಲಿ ಮೇಲ್ಮನವಿ

ಕಂಪ್ಯೂಟರ್ ವ್ಯವಸ್ಥೆಯಲ್ಲಿ ಆದ ದೋಷದ ಕಾರಣ ಅಪರಾಧಿಗಳೆಂದು ನಿರ್ಣಯಿಸಲ್ಪಟ್ಟ ಸುಮಾರು 700 ಸಬ್-ಪೋಸ್ಟ್ ಮಾಸ್ಟರ್ಗಳ ಪೈಕಿ 39 ಮಂದಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ನ್ಯಾಯಾಲಯದಲ್ಲಿ ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯ ಮೂಲದ ಸೀಮಾ ಬಿಸ್ವಾಸ್ ಮತ್ತು ವಿಜಯ್ ಪರೇಖ್ ಸೇರಿದ್ದಾರೆ. ತಮಗೆ ನ್ಯಾಯಯುತ ವಿಚಾರಣೆಯನ್ನು ನಿರಾಕರಿಸಲಾಗಿದೆ ಮತ್ತು ವಿಚಾರಣೆಯು ಸಾರ್ವಜನಿಕ ಆತ್ಮಸಾಕ್ಷಿಗೆ ಅವಮಾನವನ್ನು ಪ್ರತಿನಿಧಿಸಿದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಲಂಡನ್ನಿನ ‘ರಾಯಲ್ ಕೋರ್ಟ್ ಆಫ್ ಜಸ್ಟಿಸ್’ನ ತ್ರಿಸದಸ್ಯ ನ್ಯಾಯಪೀಠ ಮೇಲ್ಮನವಿಯ ವಿಚಾರಣೆ ನಡೆಸಿದ್ದು ‘ಹೊರಿಝಾನ್ ಕಂಪ್ಯೂಟರ್ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಸ್ಪಷ್ಟವಾದ ಸಮಸ್ಯೆಗಳಿದ್ದರೂ ಈ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿಯಿಂದ ಪೋಸ್ಟ್ ಇಲಾಖೆ ನುಣುಚಿಕೊಂಡಿದೆ. ತನಿಖೆ ನಡೆಸಲು ಮತ್ತು ತನಿಖೆಯ ವರದಿ ಬಹಿರಂಗಪಡಿಸುವಲ್ಲಿ ಪೋಸ್ಟ್ ಇಲಾಖೆಯ ವೈಫಲ್ಯತೆ ಹೊರಿಝಾನ್ ಪ್ರಕರಣ ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ವಿಚಾರಣೆಯಾಗಲು ಅಡ್ಡಿಯಾಗಿದೆ’ ಎಂದು ತೀರ್ಪು ನೀಡಿತ್ತು.

LEAVE A REPLY

Please enter your comment!
Please enter your name here