ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ)ಯಡಿ 2015-18ರವರೆಗೆ ಮಂಜೂರಾಗಿರುವ 1,80,253 ಮನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಈ ಪೈಕಿ ಫಲಾನುಭವಿಗಳು ಭರಿಸಬೇಕಿದ್ದ ವಂತಿಗೆ 4.50 ಲಕ್ಷ ರೂ.ಗಳನ್ನು ಒಂದು ಲಕ್ಷ ರೂ.ಗಳಿಗೆ ಇಳಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ವಸತಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ಮನೆಗೆ 7.50 ಲಕ್ಷ ರೂ.ವೆಚ್ಚವಾಗುತ್ತದೆ. ಇದರಲ್ಲಿ ಕೇಂದ್ರ ಸರಕಾರ 1.50 ಲಕ್ಷ ರೂ., ರಾಜ್ಯ ಸರಕಾರದಿಂದ 1.20 ಲಕ್ಷ ರೂ.(ಸಾಮಾನ್ಯ ವರ್ಗದವರಿಗೆ), ಎಸ್ಸಿ-ಎಸ್ಟಿಗಳಿಗೆ 2 ಲಕ್ಷ ರೂ.ಸಹಾಯಧನ ನೀಡಲಾಗುತ್ತದೆ. ಉಳಿದ 4.50 ಲಕ್ಷ ರೂ.ಗಳನ್ನು ಫಲಾನುಭವಿ ಪಾವತಿಸಬೇಕಿತ್ತು ಎಂದರು.
1,80,253 ಮನೆಗಳಿಗೆ ಫಲಾನುಭವಿಗಳಿಂದ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿಗೆ 6691 ಕೋಟಿ ರೂ. ಪಾವತಿಯಾಗಬೇಕಿತ್ತು. ಆದರೆ, ಬಂದಿರುವುದು ಕೇವಲ 110 ಕೋಟಿ ರೂ.ಗಳು ಮಾತ್ರ. ಫಲಾನುಭವಿಗಳು ತುಂಬಾ ಬಡವರು ಇರುವುದರಿಂದ 4.50 ಲಕ್ಷ ರೂ. ಪಾವತಿ ಕಷ್ಟವಾಗುತ್ತದೆ ಎಂದು ಮನಗಂಡು, ಈ ಮೊತ್ತವನ್ನು ಒಂದು ಲಕ್ಷ ರೂ.ಗಳಿಗೆ ಇಳಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.
ಉಳಿದ ಹಣವನ್ನು ಸರಕಾರದ ವತಿಯಿಂದ ಪಾವತಿಸಲು ತೀರ್ಮಾನಿಸಲಾಗಿದ್ದು, ಇವತ್ತಿನ ಸಂಪುಟ ಸಭೆಯಲ್ಲಿ ಮೊದಲ ಹಂತದಲ್ಲಿ 500 ಕೋಟಿ ರೂ.ಬಿಡುಗಡೆಗೆ ನಿರ್ಧರಿಸಲಾಗಿದೆ. ಈ ಹಣದಲ್ಲಿ ಮುಂದಿನ ಸಾಲಿನ ಫೆಬ್ರವರಿಯಲ್ಲಿ 48,766 ಮನೆಗಳನ್ನು ಫಲಾನುಭವಿಗಳನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಎರಡು ವರ್ಷದಲ್ಲಿ ಎಲ್ಲ 1,80,253 ಮನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಒಟ್ಟು ಫಲಾನುಭವಿ ವಂತಿಗೆ ಮೊತ್ತ 5403 ಕೋಟಿ ರೂ., ಮೂಲಭೂತ ಸೌಕರ್ಯಗಳನ್ನು ಒದಗಿಸಲು 767 ಕೋಟಿ ರೂ.ಗಳು ಸೇರಿ ಒಟ್ಟು 6170 ಕೋಟಿ ರೂ.ಗಳನ್ನು ರಾಜ್ಯ ಸರಕಾರದಿಂದ ಭರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.