ಪೆರ್ಡೂರು: ಬಂಟರ ಸಂಘ ಪೆರ್ಡೂರು ಮಂಡಲದಿಂದ ಪೆರ್ಡೂರಿನ ಉಡುಪಿ-ಆಗುಂಬೆ ರಾಷ್ಟ್ರೀಯ ಹೆದ್ದಾರಿ 169(ಎ) ಪಕ್ಕದಲ್ಲೇ ನಿರ್ಮಿಸಿರುವ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನ ಫೆ.11ರಂದು ಲೋಕಾರ್ಪಣೆಗೊಳ್ಳಲಿದೆ.
ಪೆಡೂರು ಮಂಡಲ ಬಂಟರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಅವರು ಪೆರ್ಡೂರಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದರು. ಪೆರ್ಡೂರು, ಬೈರಂಪಳ್ಳಿ, 41ನೇ ಶೀರೂರು, ಬೆಳ್ಳರ್ಪಾಡಿ ಗ್ರಾಮಗಳನ್ನು ಒಳಗೊಂಡ ಪೆರ್ಡೂರು ಮಂಡಲ ಬಂಟರ ಸಂಘ 3.5 ಎಕರೆ ವಿಶಾಲವಾದ ಪ್ರದೇಶದಲ್ಲಿ ಸುಮಾರು 7 ಕೋಟಿ ರೂ.ವೆಚ್ಚದಲ್ಲಿ ಬೃಹತ್ ಆದ ಸಮುದಾಯ ಭವನವನ್ನು ನಿರ್ಮಿಸಿದೆ ಎಂದವರು ವಿವರಿಸಿದರು.
ಪೆರ್ಡೂರು ಬಂಟರ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಸಂಘಟಿತ ಪ್ರಯತ್ನ, ನಿರಂತರ ಪರಿಶ್ರಮ ಹಾಗೂ ದಾನಿಗಳ ನೆರವಿನಿಂದ ಗ್ರಾಮೀಣ ಪ್ರದೇಶವಾದ ಪೆರ್ಡೂರಿನಲ್ಲಿ ಭವ್ಯವಾದ ಸಮುದಾಯ ಭವನ ತಲೆ ಎತ್ತಿ ನಿಂತಿದೆ. 2022ರ ಮೇ 8ರಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಬಂಟರ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು ಎಂದು ಸೂಡ ತಿಳಿಸಿದರು.
ಇದು ಉಡುಪಿ ಜಿಲ್ಲೆಯಲ್ಲೇ ಅತ್ಯಂತ ಅತ್ಯಾಕರ್ಷಕವಾದ ಬಂಟರ ಸಮುದಾಯ ಭವನವಾಗಿದ್ದು, ಪೆರ್ಡೂರು ಹಾಗೂ ಸುತ್ತಮುತ್ತಲಿನ ಜನತೆಗೆ ಪಟ್ಟಣದ ಭವ್ಯ, ಅತ್ಯಾಧುನಿಕ ವ್ಯವಸ್ಥೆಯ ಸಭಾಭವನವನ್ನು ತನ್ನೂರಿನಲ್ಲೇ ಕಾಣುವ ಸಂಭ್ರಮ ದೊರಕಿದೆ ಎಂದು ಶಾಂತಾರಾಮ ಸೂಡ ಹೇಳಿದರು.
ಇದು ಸಂಪೂರ್ಣ ಹವಾನಿಯಂತ್ರಿತವಾಗಿದೆ. ಇಲ್ಲಿ ಬಂಟ ಸಮಾಜ ದವರಿಗೆ ಮಾತ್ರವಲ್ಲದೇ ಸಮಾಜದ ಎಲ್ಲಾ ಸಮುದಾಯದವರಿಗೂ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಲಭ್ಯವಿರುತ್ತದೆ. ಎಸಿ ವ್ಯವಸ್ಥೆ ಯೊಂದಿಗೆ ಈ ಸಭಾಭವನ 75,000ರೂ. ಬಾಡಿಗೆಗೆ ಲಭ್ಯವಾಗಲಿದೆ. ನಾನ್ ಎಸಿಯಾದರೆ 60,000ರೂ.ಬಾಡಿಗೆ ಪಡೆಯಲಾಗುವುದು. ಪೆರ್ಡೂರು ಆಸುಪಾಸಿನ ಬಂಟರ ಕಾರ್ಯಕ್ರಮಕ್ಕೆ ನಾನ್ಎಸಿಗೆ 50ಸಾವಿರ ಬಾಡಿಗೆ ಪಡೆಯಲಾಗುವುದು ಎಂದರು. ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಭಾಭವನವನ್ನು ಬಾಡಿಗೆಗೆ ನೀಡಲಾಗುತ್ತದೆ ಎಂದರು.
ಹವಾನಿಯಂತ್ರಿತ ಸಭಾಭವನದಲ್ಲಿ 900ಕ್ಕೂ ಅಧಿಕ ಮಂದಿಗೆ ಕುಳಿತು ಕೊಳ್ಳುವ ವ್ಯವಸ್ಥೆ ಇದ್ದು, 600ಕ್ಕೂ ಅಧಿಕ ಮಂಡಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶಾಲವಾದ ವೇದಿಕೆ, ಬೃಹತ್ ಗ್ರೀನ್ರೂಮ್ ಇದೆ. ಸಸ್ಯಾಹಾರ ಹಾಗೂ ಮಾಂಸಹಾರಕ್ಕೆ ಪ್ರತ್ಯೇಕ ಹವಾನಿಯಂತ್ರಿಕ ಕಿಚನ್ ಹಾಲ್ ವ್ಯವಸ್ಥೆ ಇದೆ. 24ಗಂಟೆ ನೀರು ಹಾಗೂ ಲಿಫ್ಟ್ನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಮೇಲಿನ ಮಹಡಿಯಲ್ಲಿ ಆರು ಆಧುನಿಕ ಹವಾನಿಯಂತ್ರಿಕ ಅತಿಥಿಗೃಹವಿದೆ. ಇದರಲ್ಲೇ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಚೇರಿ ತೆರೆಯಲಾಗುವುದು. ಸಭಾಭವನದಲ್ಲಿ 600 ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಇದೆ ಎಂದವರು ನುಡಿದರು.
ಭವಿಷ್ಯದಲ್ಲಿ ಇಲ್ಲೇ 300 ಮಂದಿಗಾಗುವ ಮಿನಿಹಾಲ್ ನಿರ್ಮಿಸುವ ಹಾಗೂ ಬಯಲು ವೇದಿಕೆ ನಿರ್ಮಿಸುವ ಯೋಜನೆ ಯನ್ನು ಹಾಕಿಕೊಳ್ಳಲಾಗಿದೆ ಎಂದ ಅವರು ಫೆ.11ರಂದು ಬೆಳಗ್ಗೆ 10:30ಕ್ಕೆ ನಡೆಯುವ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರಾದ ಸುಬ್ಬಯ್ಯ ಶೆಟ್ಟಿ, ಡಾ.ಎಚ್.ಎಸ್.ಬಲ್ಲಾಳ್, ಅಜಿತ್ಕುಮಾರ್ ರೈ ಮಾಲಾಡಿ, ಕೆ.ಪ್ರಕಾಶ ಶೆಟ್ಟಿ, ಶೇಡಿಕೊಡ್ಲು ವಿಠಲ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಡಾ.ಕೈಲ್ಕೆರೆ ಭಾಸ್ಕರ ಶೆಟ್ಟಿ, ಲೀಲಾವತಿ ಎಸ್.ಹೆಗ್ಡೆ, ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ, ಡಾ.ಎ.ಮನೋರಂಜನ್ದಾಸ್ ಹೆಗ್ಡೆ, ಎನ್.ಬಿ.ಶೆಟ್ಟಿ ಭಾಗವಹಿಸುವರು.
ಅಲ್ಲದೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎಚ್.ಮಂಜುನಾಥ ಭಂಡಾರಿ, ಕಿಶೋರ್ ಆಳ್ವ, ಮುನಿಯಾಲು ಉದಯಕುಮಾರ್ ಶೆಟ್ಟಿ, ಕೆ.ರಾಜಾರಾಮ ಹೆಗ್ಡೆ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಕುತ್ಯಾರುಬೀಡು, ಕೋಶಾಧಿಕಾರಿ ಪ್ರಮೋದ್ ರೈ ಪಳಜೆ, ಉಪಾಧ್ಯಕ್ಷರಾದ ದಿನೇಶ್ಚಂದ್ರ ಶೆಟ್ಟಿ ಬಜ್ವಾಲು, ರಾಜಕುಮಾರ್ ಶೆಟ್ಟಿ ದೊಡ್ಮನೆ, ಶಿವರಾಮ ಶೆಟ್ಟಿ ಬೆಳ್ಳರ್ಪಾಡಿ ಹಾಗೂ ಮಹೇಶ್ ಶೆಟ್ಟಿ ಪೈಬೆಟ್ಟು ಉಪಸ್ಥಿತರಿದ್ದರು.