ಮಂಗಳೂರು, ಜ.6: ಕಾನೂನನ್ನು ಗೌರವಿಸುವ, ಪ್ರಾಮಾಣಿಕ, ಜನರ ನಡುವೆ ಒಗ್ಗಟ್ಟು ತರುವ ಜನಪ್ರತಿನಿಧಿಗಳ ಮೂಲಕ ರಾಜಕೀಯ ವ್ಯವಸ್ಥೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಸಮಾಜದಲ್ಲಿ ಬದಲಾವಣೆ ತರುವ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ ಎಂದು ಎಂದು ನಿವೃತ್ತ ಲೋಕಾಯುಕ್ತ ಡಾ. ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ.
ನಗರದ ರೋಶನಿ ನಿಲಯಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ನ ಎಂಎಸ್ಡಬ್ಲ್ಯು ವಿಭಾಗದ ವತಿಯಿಂದ ಶನಿವಾರ ಆಯೋಜಿಸಲಾದ ‘ಪರಿಸರವನ್ನು ಪ್ರೀತಿಸಿ, ಪರಿಸರವನ್ನು ಸಂರಕ್ಷಿಸಿ’ ಎಂಬ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾನವನ ದುರಾಸೆ, ರಾಜಕೀಯ ಕ್ಷೇತ್ರದಲ್ಲಿನ ಭ್ರಷ್ಟತೆಯಿಂದ ದೇಶದ ಆರ್ಥಿಕತೆಗೆ ತೀವ್ರವಾದ ಹೊಡೆತ ಬೀಳುತ್ತಿದ್ದು, ಇದರ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಬದಲಾವಣೆ ಯುವ ಪೀಳಿಗೆಯಿಂದ ಸಾಧ್ಯ ಎಂದು ಹೇಳಿದರು.
ನಾನು ಪರಿಸರವಾದಿಯಲ್ಲ ಎಂದು ಕಾರ್ಯಕ್ರಮದಲ್ಲಿ ಮಾತು ಆರಂಭಿಸಿದ ಸುಪ್ರೀಂ ಕೋರ್ಟ್ನ ನಿರ್ವತ್ತ ನ್ಯಾಯಮೂರ್ತಿಯೂ ಆಗಿರುವ ಡಾ. ಎನ್. ಸಂತೋಷ್ ಹೆಗ್ಡೆ, ಲೋಕಾಯುಕ್ತನಾಗಿದ್ದ ಸಂದರ್ಭ ಪರಿಸರ ಸಂಬಂಧಿ ಕಾನೂನುಗಳನ್ನು ಸಾಕಷ್ಟು ತಿಳಿದುಕೊಂಡಿದ್ದೇನೆ. ಪರಿಸರಕ್ಕೆ ನಾಶಕ್ಕೆ ಪೂರಕವಾಗಿ ಸಾಕಷ್ಟು ಅಧ್ಯಯನ ವರದಿಗಳನ್ನು ಅರಿತುಕೊಂಡಿದ್ದೇನೆ. ಪರಿಸರ ನಾಶಕ್ಕೆ ಮಾನವ ಅತಿಯಾದ ದುರಾಸೆ ಅತೀ ಮುಖ್ಯ ಕಾರಣವಾಗಿದ್ದು, ಸುಸ್ಥಿರ ಅಭಿವೃದ್ಧಿಯಿಂದ ಮಾತ್ರವೇ ದೇಶದ ಆರ್ಥಿಕತೆ ಸದೃಢವಾಗಿರಲು ಕಾರಣ ಎಂಬುದನ್ನು ಪ್ರತಿಪಾದಿಸುತ್ತಾ ಬಂದಿರುವುದಾಗಿ ಹೇಳಿದರು.
ದೇಶದಲ್ಲಿ ನಡೆದ ಜೀಪ್, ಬೋಫೋರ್ಸ್, ಕಾಮನ್ವೆಲ್ತ್ ಗೇಮ್, ಇಜಿ, ಕೋಲ್ಗೇಟ್ ಮೊದಲಾದ ಹಗರಣಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಈ ರೀತಿ ಹಗರಣಗಳು ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀಳುತ್ತವೆ. ಇದಕ್ಕೆ ಕಾರಣ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ಬದಲಾಯಿಸುವ ಜವಾಬ್ಧಾರಿಯನ್ನು ಯುವ ಪೀಳಿಗೆ ವಹಿಸಬೇಕಾಗಿದೆ ಎಂದರು.
ಕಾರ್ಯಕ್ರಮ ಆರಂಭದಲ್ಲಿ ಮಂಗಳೂರು ಸ್ಮಾಟ್ ಸಿಟಿ ಲಿಮಿಟೆಡ್ ವತಿಯಿಂದ ನಡೆಯುತ್ತಿರುವ ವಾಟರ್ ಫ್ರಂಟ್ (ಜಲಾಭಿಮುಖ ಯೋಜನೆ)ಗಾಗಿ ನೇತ್ರಾವತಿ ನದಿಯ ಒತ್ತುವರಿ, ಅಲ್ಲಿನ ಹಸಿರು ಪರಿಸರ ಮಾಯವಾಗಿರುವುದು, ಜೀವ ಸಂಕುಲಗಳು ಮಾಯವಾಗಿರುವ ಬಗ್ಗೆ ‘ನೇತ್ರಾವತಿ ರಕ್ಷಿಸಿ- ನಮ್ಮ ನೇತ್ರಾವತಿ’ ಎಂಬ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.
ರೋಶನಿ ನಿಲಯ ಕಾಲೇಜಿನ ಪ್ರೊ. ವಿನೀತಾ ರೈ, ಗ್ಲೋಬಲ್ ಟಿವಿಯ ಪೌಲಾಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಾಂತನಿ ಸ್ವಾಗತಿಸಿದರು.
‘ದುರಾಸೆಯ ದುಷ್ಪರಿಣಾಮಗಳನ್ನು ನಾವು ಈಗಾಗಲೇ ಗಾಜಾ- ಇಸ್ರೇಲ್ನಲ್ಲಿ ನಡೆಯುತ್ತಿರುವ ಯುದ್ಧದ ಸನ್ನಿವೇಶ ಸೇರಿದಂತೆ ಇತರ ಹಲವಾರು ಘಟನೆಗಳಿಂದ ನೋಡುತ್ತಿದ್ದೇವೆ. ಅಲ್ಲಿನ ಪ್ರಜೆಗಳು ಯಾರೂ ಯುದ್ಧ ಬಯಸುವುದಿಲ್ಲ. ಅದು ಬೇಕಾಗಿರುವುದು ಮೂರನೆಯವರಿಗೆ. ಆದರೆ ಪರಿಣಾಮ ಎದುರಿಸುತ್ತಿರುವವರು ಅಲ್ಲಿನ ಜನತೆ. ನಮ್ಮ ನೆರೆಯ ಶ್ರೀಲಂಕಾ, ಪಾಕಿಸ್ತಾನದಲ್ಲಿ ಆರ್ಥಿಕತೆ ಕುಸಿಯುತ್ತಿದೆ. 1985ರಲ್ಲಿ ಡಾಲರ್ ಮೌಲ್ಯ 4.50ರೂ.ಗಳಾಗಿತ್ತು. ಅದು ಈಗ 83 ರೂ.ಗಳಾಗಿವೆ. ಹೀಗೆ ಮುಂದುವರಿದರೆ ನಮ್ಮ ದೇಶದಲ್ಲಿಯೂ ಮುಂದಿನ ದಿನಗಳಲ್ಲಿ ನಾವು ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಯುವಜನತೆಯನ್ನು ಜಾಗೃತಗೊಳಿಸುವ ನಿಟ್ಟನಲ್ಲಿ 2011ರಲ್ಲಿ ನಿವೃತ್ತನಾದ ಬಳಿಕ ನಾನು ನನ್ನದೇ ಖರ್ಚು ವೆಚ್ಚದಲ್ಲಿ ದೇಶದ ವಿವಿಧ ಕಡೆ ಪ್ರಯಾಣ ಬೆಳೆಸಿ ಶಾಲಾ ಕಾಲೇಜು ಮಕ್ಕಳ ಜತೆ ಸಂವಾದದ ಮೂಲಕ ಎಚ್ಚರಿಸುವ ಕಾರ್ಯ ಮಾಡುತ್ತಿದ್ದೇನೆ. ಇದು ನಾನು ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಜತೆ ನಡೆಸುತ್ತಿರುವ 1812ನೆ ಸಂವಾದ ಕಾರ್ಯಕ್ರಮವಾಗಿದೆ.’
*ಡಾ.ಎನ್. ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ.