Home ಕರ್ನಾಟಕ ಬಿಎಸ್ಪಿ ಶಾಸಕನ ಹತ್ಯೆ ಪ್ರಕರಣ: ಆರು ಮಂದಿಗೆ ಜೀವಾವಧಿ ಶಿಕ್ಷೆ

ಬಿಎಸ್ಪಿ ಶಾಸಕನ ಹತ್ಯೆ ಪ್ರಕರಣ: ಆರು ಮಂದಿಗೆ ಜೀವಾವಧಿ ಶಿಕ್ಷೆ

24
0

ಲಕ್ನೋ: ಕಳೆದ ವರ್ಷ ಪ್ರಯಾಗ್ರಾಜ್ ನಲ್ಲಿ ಹತ್ಯೆಗೀಡಾಗಿದ್ದ ಕುಖ್ಯಾತ ರೌಡಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್, ರೂಪಿಸಿದ್ದರು ಎನ್ನಲಾದ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಸಂಚಿನ ಆರೋಪದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜತೆಗೆ 11.6 ಲಕ್ಷ ರೂಪಾಯಿ ದಂಡ ವಿಧಿಸಿದೆ. ಶಿಕ್ಷೆಗೆ ಒಳಗಾದ ಒಬ್ಬ ಆರೋಪಿ ನ್ಯಾಯಾಲಯದಲ್ಲಿ ಹಾಜರಿಲ್ಲದ ಕಾರಣ, ಆತನ ಶಿಕ್ಷೆಯನ್ನು ಮುಂದೆ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಕೂಡಾ ಆರೋಪಿಗಳಾಗಿದ್ದರು. 2005ರ ಜನವರಿಯಲ್ಲಿ ರಾಜು ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಗುಂಡಿನ ಮಳೆಗೆರೆಯಲಾಗಿತ್ತು. ಪ್ರಯಾಗ್ರಾಜ್ ಪಶ್ಚಿಮ ಕ್ಷೇತ್ರದಲ್ಲಿ 2004ರ ಉಪ ಚುನಾವಣೆಯಲ್ಲಿ ಅಶ್ರಫ್ ಅವರನ್ನು ಸೋಲಿಸಿ ಪಾಲ್ ಗೆದ್ದ ಹಿನ್ನೆಲೆಯಲ್ಲಿ ಆರಂಭವಾದ ರಾಜಕೀಯ ಸೇಡಿನಿಂದ ಈ ಹತ್ಯೆ ನಡೆಸಲಾಗಿದೆ ಎಂದು ಆಪಾದಿಸಲಾಗಿತ್ತು.

“ನ್ಯಾಯಾಲಯದ ತೀರ್ಪಿನಿಂದ ನನಗೆ ಸಮಾಧಾನವಾಗಿದೆ. ಆದರೆ ಹಾಡಹಗಲೇ ಒಬ್ಬ ಶಾಸಕನನ್ನು ಹತ್ಯೆ ಮಾಡಿದ ಈ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕಿತ್ತು” ಎಂದು ಎಸ್ಪಿ ಶಾಸಕಿ ಹಾಗೂ ಪಾಲ್ ಪತ್ನಿ ಪೂಜಾ ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣದಲ್ಲಿ ಸಿಬಿಐ  2019ರಲ್ಲಿ ಅತೀಕ್ ಹಾಗೂ ಅಶ್ರಫ್ ಸೇರಿದಂತೆ 10 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಈ ಪೈಕಿ ಒಬ್ಬ ಆರೋಪಿ ಗುಲ್ಫೂಲ್ ಅಲಿಯಾಸ್ ರಫೀಕ್ ಅಹ್ಮದ್ ವಿಚಾರಣೆ ವೇಳೆ ಮೃತಪಟ್ಟಿದ್ದ. ಅಬೀದ್, ಫರ್ಹಾನ್ ಅಹ್ಮದ್, ಜಾವೇದ್, ರಂಜಿತ್, ಗುಲ್ ಹಸನ್ ಮತ್ತು ಅಬ್ದುಲ್ ಕಾವಿ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಏಳನೇ ಆರೋಪಿ ಇಸ್ರಾರ್ ಅಹ್ಮದ್ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.

ನ್ಯಾಯಾಲಯ ಇಸ್ರಾರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಿದ್ದು, ಶಿಕ್ಷೆ ಘೋಷಿಸಲು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಿದೆ ಎಂದು ಹಿರಿಯ ವಕೀಲರೊಬ್ಬರು ಹೇಳಿದ್ದಾರೆ.

LEAVE A REPLY

Please enter your comment!
Please enter your name here