ಹೊಸದಿಲ್ಲಿ: ಒಂದು ದಿನದ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಕಾಶ್ಮೀರಿ ಪತ್ರಕರ್ತ ಆಸಿಫ್ ಸುಲ್ತಾನ್ ಅವರನ್ನು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿಯ ಹಳೆಯ ಪ್ರಕರಣದಲ್ಲಿ ಮತ್ತೆ ಬಂಧಿಸಲಾಗಿದೆ.
ಪ್ರಶಸ್ತಿ ವಿಜೇತ ಪತ್ರಕರ್ತರಾಗಿರುವ ಆಸಿಫ್ ಸುಲ್ತಾನ್ ಅವರು ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ 2022ರಿಂದ ಉತ್ತರ ಪ್ರದೇಶದ ಅಂಬೇಡ್ಕರ್ ನಗರ್ ಜೈಲಿನಲ್ಲಿ ಬಂಧನದಲ್ಲಿದ್ದರು. ಗುರುವಾರವಷ್ಟೇ ಅವರನ್ನು ಶ್ರೀನಗರದ ಬಟಮಲೂ ಕ್ಷೇತ್ರದ ಅವರ ನಿವಾಸಕ್ಕೆ ಕರೆತರಲಾಗಿತ್ತು.
ಕಳೆದ ವರ್ಷದ ಡಿಸೆಂಬರಿನಲ್ಲಿ ಸುಲ್ತಾನ್ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯಿದೆಯ ಅಡಿಯ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವಜಾಗೊಳಿಸಿತ್ತಲ್ಲದೆ ಅವರ ವಿರುದ್ಧದ ಆರೋಪಗಳಿಗೆ ಯಾವುದೇ ಆಧಾರವಿಲ್ಲ, ಆದಷ್ಟು ಬೇಗ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಬೇಕೆಂದು ಸೂಚಿಸಿತ್ತು.
ಆದರೆ ಪ್ರಕ್ರಿಯಾತ್ಮಕ ವಿಳಂಬಗಳನ್ನು ಮುಂದೊಡ್ಡಿ ಸುಲ್ತಾನ್ ಅವರ ಬಿಡುಗಡೆಗೆ ಎರಡು ತಿಂಗಳಿಗೂ ಹೆಚ್ಚು ಸಮಯ ತಗಲಿತ್ತು.
ಶ್ರೀನಗರಕ್ಕೆ ಗುರುವಾರ ಮರಳಿದ ನಂತರ ಸಂಜೆ ಅವರನ್ನು ಶ್ರೀನಗರದ ರೈನಾವಾರ ಠಾಣೆಗೆ ಬರಹೇಳಲಾಗಿತ್ತು ಹಾಗೂ ನಂತರ ನೌಹಟ್ಟ ಠಾಣೆಯಲ್ಲಿ ಅವರ ವಿರುದ್ಧ ದಾಖಲಾದ ಯುಎಪಿಎ ಪ್ರಕರಣದಡಿ ಅವರನ್ನು ಬಂಧಿಸಲಾಯಿತು.
ಈಗ ಕಾರ್ಯಾಚರಿಸದೇ ಇರುವ ಕಾಶ್ಮೀರ್ ನೆರೇಟರ್ ಆಂಗ್ಲ ಮ್ಯಾಗಜೀನ್ಗೆ ಸುಲ್ತಾನ್ ಈ ಹಿಂದೆ ಕೆಲಸ ಮಾಡುತ್ತಿದ್ದರು ಅವರು ತಮ್ಮ ಶ್ರೀನಗರ ನಿವಾಸದಲ್ಲಿ ಉಗ್ರರಿಗೆ ಆಶ್ರಯ ಒದಗಿಸುತ್ತಿದ್ದರೆಂಬ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.