ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದದಾರೆ.
ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಈ ರಂಜಾನ್ ಆಹಾರ ಮೇಳವನ್ನು ನಿಲ್ಲಿಸಬೇಕೆಂದು ಸ್ಥಳೀಯ ನಿವಾಸಿಗಳು, ಪುಲಕೇಶಿನಗರ ಶಾಸಕ ಎಸಿ ಶ್ರೀನಿವಾಸ್, ಪೊಲೀಸರು ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ನಿವಾಸಿಗಳು ತಮ್ಮ ಮನವಿಯಲ್ಲಿ ಅಂಗಡಿಗಳು, ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಪೊಲೀಸರು ಮತ್ತು ಅಧಿಕಾರಿಗಳು, ರಂಜಾನ್ ಆಹಾರ ಮೇಳದ ಹೆಸರಿನಲ್ಲಿ ಯಾವುದೇ ಪಾದಚಾರಿ ಮಾರ್ಗ ಅತಿಕ್ರಮಣಕ್ಕೆ ಅವಕಾಶ ನೀಡುವುದಿಲ್ಲ. ಏಕೆಂದರೆ ಈ ತಿನಿಸುಗಳು ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ಹೇಳಿದ್ದಾರೆ.
ರಂಜಾನ್ ಸಮಯದಲ್ಲಿ ತಮ್ಮ ಅಂಗಡಿಗಳನ್ನು ಪಾದಚಾರಿ ಮಾರ್ಗಗಳಿಗೆ ವಿಸ್ತರಿಸದಂತೆ ಹೋಟೆಲ್ ಗಳಿಗೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿದರೆ “ದಂಡ ವಿಧಿಸಲಾಗುವುದು ಮತ್ತು ಅವರ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಆಹಾರ ಮೇಳದ ಹೆಸರಿನಲ್ಲಿ ಯಾವುದೇ ತೊಂದರೆಗೆ ಅವಕಾಶ ನೀಡವುದಿಲ್ಲ” ಎಂದು ಶಾಸಕ ಶ್ರೀನಿವಾಸ್ ಹೇಳಿದ್ದಾರೆ.
ರಂಜಾನ್ ಆಹಾರ ಮೇಳೆದಸಮಯದಲ್ಲಿ ರಸ್ತೆಬದಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ತಿನಿಸುಗಳು ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ, ಶಬ್ದ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ಫ್ರೇಸರ್ ಟೌನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(FTRWA) ಹೇಳಿವೆ.
ಈ ಸಂಬಂಧ ಫೆಬ್ರವರಿ 16 ರಂದು ಶಾಸಕ ಶ್ರೀನಿವಾಸ್ ಅವರ ಕಚೇರಿಯಲ್ಲಿ ಬೆಂಗಳೂರು ಉತ್ತರ ನಗರ ನಿಗಮದ ಅಧಿಕಾರಿಗಳನ್ನು ಭೇಟಿಯಾಗಿ ಒಂದೇ ಒಂದು ಬೇಡಿಕೆ ಇಟ್ಟಿದ್ದೇವೆ. ರಂಜಾನ್ ತಿಂಗಳಲ್ಲಿ ಆಹಾರ ಮೇಳ ಬೇಡ. “ಈ ಮೇಳವು ನಿವಾಸಿಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಮೇಲೆ ಹಲವು ರೀತಿಯಲ್ಲಿ ತೀವ್ರ ಪರಿಣಾಮ ಬೀರುತ್ತದೆ ಎಂದು FTRWAನ ಖಾಸಿಯರ್ ಅಹ್ಮದ್ ಅವರು ಹೇಳಿದ್ದಾರೆ.
