ಬೆಂಗಳೂರು, ಡಿ.15: ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವುಗಳ ಲೇಬಲ್ ಅಳಿಸಿ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 10 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರ ಠಾಣೆ ವ್ಯಾಪ್ತಿಯ ಅರೆಕಂಪನಹಳ್ಳಿಯಲ್ಲಿರುವ ಎಚ್.ಎಂ.ಟ್ರೇಡರ್ಸ್ ಎಂಬ ದಿನಸಿ ಅಂಗಡಿ ಮಾಲಕ ಇಮ್ರಾನ್ ಖಾನ್(40) ಬಂಧಿತ ಆರೋಪಿ. ಈತ ತನ್ನ ಅಂಗಡಿಯಲ್ಲಿ ಅವಧಿ ಮೀರಿದ ಪ್ರತಿಷ್ಠಿತ ಕಂಪೆನಿಗಳಿಗೆ ಸೇರಿದ ಚಾಕಲೇಟ್, ಬಿಸ್ಕೆಟ್ ಮತ್ತು ತಿಂಡಿ, ತಿನಿಸು ಮತ್ತಿತರ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅವಧಿ ಮೀರಿದ ಪದಾರ್ಥಗಳ ಮೇಲಿನ ದಿನಾಂಕದ ಅವಧಿ ಮತ್ತು ದರ ಪಟ್ಟಿಯ ಲೇಬಲ್ ತೆಗೆದು ಹಾಕಿ, ಸಾರ್ವಜನಿಕರಿಗೆ ಮಾರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆತನ ಮಳಿಗೆಯಲ್ಲಿದ್ದ 10 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಪಾದರ್ಥಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಸಿಸಿಬಿ ಆರ್ಥಿಕ ಅಪರಾಧ ದಳದ ಎಸಿಬಿ ಮಂಜುನಾಥ್ ಚೌಧರಿ, ಇನ್ ಸ್ಪೆಕ್ಟರ್ ಸಂತೋಷ್ ರಾವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಸಗಟು ವ್ಯಾಪಾರಿಗಳಿಂದ ಖರೀದಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸಗಟು ವ್ಯಾಪಾರಿಗಳು ಕಂಪೆನಿಗಳಿಗೆ ಹಿಂದಿರುಗಿಸುತ್ತಾರೆ. ಆದರೆ, ಕೆಲ ಸಗಟು ವ್ಯಾಪಾರಿಗಳು, ಕಂಪೆನಿಗಳಿಂದ ಹಣ ವಾಪಸ್ ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ, ಅಲ್ಪ ಮೊತ್ತಕ್ಕೆ ಇಂತಹ ವ್ಯಾಪಾರಿಗಳಿಗೆ ಮಾರುತ್ತಾರೆ. ಅವುಗಳನ್ನು ಖರೀದಿಸಿದ ವ್ಯಾಪಾರಿ ಅವುಗಳ ಮೇಲಿನ ಲೇಬಲ್ ತೆಗೆದು ಹಾಕಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಾನೆ ಎಂದು ಸಿಸಿಬಿ ಎಂದು ಪೊಲೀಸರು ತಿಳಿಸಿದ್ದಾರೆ.