ಬೆಂಗಳೂರು: ವಸತಿ ನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುತ್ತಿರುವ ಕನಿಷ್ಠ ವೇತನವನ್ನು ಮಾಸಿಕ 35,950ರೂ.ಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶುಕ್ರವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ರಾಜ್ಯ ಸಮಿತಿಯಿಂದ ನಡೆದ ಪ್ರತಿಭಟನಾ ಧರಣಿಯಲ್ಲಿ ಒತ್ತಾಯಿಸಲಾಯಿತು.
ಹಿಂದಿನ ಸರಕಾರದ ಕನಿಷ್ಠ ವೇತನ ಪರಿಷ್ಕರಣೆಯ ಸಂದರ್ಭದಲ್ಲಿ ನಾಲ್ಕು ವಲಯಗಳನ್ನಾಗಿ ವಿಭಾಗಿಸಿರುವ ಕಾರ್ಮಿಕ ವಿರೋಧಿ ಆದೇಶವನ್ನು ರದ್ದುಗೊಳಿಸಿ 3 ವಲಯಗಳಿಗೆ ಸೀಮಿತಗೊಳಿಸಬೇಕು. ವಸತಿನಿಲಯ/ವಸತಿಶಾಲೆ/ಕಾಲೇಜು/ಆಶ್ರಮಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ.ಗ್ರೂಪ್ನ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರನ್ನು ಖಾಯಂಗೊಳಿಸಬೇಕೆಂದು ಧರಣಿಯಲ್ಲಿ ಆಗ್ರಹಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಕಡಿತದ ಆದೇಶವನ್ನು ಹಿಂಪಡೆಯಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ಇಲಾಖೆಯಲ್ಲಿ ವಸತಿ ಕಾರ್ಮಿಕರ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ರೊಟ್ಟಿ ಬಡಿಯುವ ಕೆಲಸ ಇರುವುದರಿಂದ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕೆಂದು ಒತ್ತಾಯಿಸಲಾಯಿತು.
ಬಿಸಿಎಂ ಇಲಾಖೆಯಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳಿಗೆ ಕಾವಲುಗಾರರ ಹುದ್ದೆ ಮಂಜೂರು ಮಾಡಬೇಕು. ಕಾನೂನುಬದ್ದವಾಗಿ ನೀಡಲೇಬೇಕಾದ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆಗಳನ್ನು ನೀಡಬೇಕು ಅಥವಾ ರಜೆ ದಿನಗಳಲ್ಲಿ ಕೆಲಸ ಮಾಡಿಸಿಕೊಂಡಲ್ಲಿ ಕಾರ್ಮಿಕ ಕಾಯ್ದೆಯನ್ವಯ ದುಪ್ಪಟ್ಟು ವೇತನ ನೀಡಬೇಕು ಎಂಬ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಧರಣಿಯಲ್ಲಿ ಆಗ್ರಹಿಸಲಾಯಿತು.
ಲಾಕ್ಡೌನ್ ಅವಧಿಯ ವೇತನ ತಕ್ಷಣವೇ ಪಾವತಿ ಮಾಡಬೇಕು. ಮಾಸಿಕ ವೇತನ, ಇಪಿಎಫ್ ಮತ್ತು ಇಎಸ್.ಐ ವಂತಿಗೆಯನ್ನು ಪ್ರತಿ ತಿಂಗಳು ನೀಡದ ಗುತ್ತಿಗೆ ಏಜೆನ್ಸಿಯವರ ಮೇಲೆ ದೂರು ದಾಖಲಿಸಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಹಾಗೂ ಕಾರ್ಮಿಕರ ಖಾತೆಗಳಿಗೆ ಪ್ರತಿ ತಿಂಗಳು ಮಾಸಿಕ ವೇತನ, ಇ.ಪಿಎಫ್ ಮತ್ತು ಇಎಸ್.ಐ ವಂತಿಗೆ ಜಮಾ ಆಗುವಂತೆ ಕ್ರಮವಹಿಸಬೇಕೆಂದು ಧರಣಿಯಲ್ಲಿ ಒತ್ತಾಯಿಸಲಾಯಿತು.
ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ವಸತಿ ನಿಲಯ ಕಾರ್ಮಿಕರ ಸಂಘದ ನಿಯೋಗ ಭೇಟಿ ಮಾಡಿ ಕಾರ್ಮಿಕರ ಬಾಕಿ ವೇತನ ಪಾವತಿಸಲು ಕೋರಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಮಿಕ ಸಚಿವರ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಸಚಿವಾಲಯದ ಹೆಚ್ಚುವರಿ ಕಾರ್ಮಿಕ ಆಯುಕ್ತ ರವಿಕುಮಾರ, ಮನವಿ ಪತ್ರ ಸ್ವೀಕರಿಸಿ, ವೇತನ ಚೀಟಿ, ನೇಮಕಾತಿ ಆದೇಶ ನೀಡುವುದು, ವಾರದ ರಜೆ, ಹೆಚ್ಚುವರಿ ಕೆಲಸಕ್ಕೆ (ಓಟಿ) ನೀಡುವುದು ಸೇರಿದಂತೆ ಶಾಸನಬದ್ಧ ಸೌಲಭ್ಯಗಳು ಮತ್ತು ಇಪಿಎಫ್ ಮತ್ತು ಇಎಸ್.ಐ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.