ಹಸು ಹುಡುಕಲು ಹೋಗಿ ವಿದ್ಯುತ್ ಬೇಲಿ ತುಳಿದ ಪರಿಣಾಮ ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಾಗಡಿ ಮುಖ್ಯರಸ್ತೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಬೆಂಗಳೂರು: ಹಸು ಹುಡುಕಲು ಹೋಗಿ ವಿದ್ಯುತ್ ಬೇಲಿ ತುಳಿದ ಪರಿಣಾಮ ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಾಗಡಿ ಮುಖ್ಯರಸ್ತೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಹತ್ಯೆಗೀಡಾದವರನ್ನು ಮಾಗಡಿಯ ಬಾಚೇನಹಟಿ ನಿವಾಸಿ ಆನಂದ್ (45) ಎಂದು ಗುರ್ತಿಸಲಾಗಿದೆ. ತಮ್ಮ ಜಮೀನಿನ ಬಳಿ ಮೇಯುತ್ತಿದ್ದ ಕರು ಕಾಣಿಸದೇ ಇದ್ದ ಹಿನ್ನೆಲೆಯಲ್ಲಿ ಆನಂದ್ ಅವರು ಹುಡುಕಾಟ ನಡೆಸುತ್ತಿದ್ದರು.
ಈ ವೇಳೆ ಜಮೀನೊಂದಕ್ಕೆ ಅಳವಡಿಸಲಾದ ವಿದ್ಯುತ್ ತಂತಿ ಬೇಲಿ ತಗುಲಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪಿದ್ದಾರೆ.
ಘಟನೆ ಸಂಬಂಧ ಆನಂದ್ ಅವರ ಪುತ್ರ ಬಿಎ ಮನ್ಮಥ, ಜಮೀನು ಮಾಲೀಕ ಬಾಚೇನಹಟ್ಟಿಯ ಸಿ ರಂಗಸ್ವಾಮಯ್ಯ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆನಂದ್ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆನಂದ್ ಅವರು ಜಮೀನಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ತಿಳಿದುಬಂದಿದೆ.
ರಂಗಸ್ವಾಮಯ್ಯ ಅವರು ತಮ್ಮ ಜಮೀನಿನಲ್ಲಿದ್ದ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ವಿದ್ಯುತ್ ಬೇಲಿಯನ್ನು ಹಾಕಿದ್ದರು. ಆದರೆ, ಈ ಬಗ್ಗೆ ಯಾವುದೇ ರೀತಿಯ ಎಚ್ಚರಿಕೆಯ ಬೋರ್ಡ್ ಗಳನ್ನು ಹಾಕಿರಲಿಲ್ಲ. ಇದನ್ನು ತಿಳಿಯದ ಆನಂದ್ ಅವರು ಬೇಲಿ ತುಳಿದಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸಂಬಂಧ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.