ಬೆಂಗಳೂರು : ಇಲ್ಲಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಕೆ.ಡಬ್ಲ್ಯೂ ಮೈದಾನದ ಬಳಿ 110 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಪೊಲೀಸರು ಮಾಲನ್ನು ಹಾಜರುಪಡಿಸದ ಹಿನ್ನೆಲೆ, ಮಾನವೀಯತೆ ದೃಷ್ಠಿಯಿಂದ ಆರೋಪಿಯನ್ನು ಬಿಡುಗಡೆಗೊಳಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಪೊಲೀಸ್ ಇನ್ಸ್ಪೆಕ್ಟರ್ ಐಯಣ್ಣ ರೆಡ್ಡಿ ಅವರು ಆರೋಪಿ ಶಿವಕುಮಾರ್ ಎಂಬಾತನಿಂದ 17 ಕೆ.ಜಿ ಗಾಂಜಾ ಹಾಗೂ ಆತನ ಮನೆಯಿಂದ 93 ಕೆ.ಜಿ ಗಾಂಜಾ ಸೇರಿ ಒಟ್ಟು 110 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡು, ಈ ಬಗ್ಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಸಂಬಂಧ ನಗರ ಸಿವಿಲ್ ಮತ್ತು ಸತ್ರ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣ ತನಿಖಾಧಿಕಾರಿ ಇನ್ಸ್ಪೆಕ್ಟರ್ ಐಯಣ್ಣರೆಡ್ಡಿ ಅವರು ವಶಪಡಿಸಿಕೊಂಡ ಗಾಂಜಾವನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸದೆ, ಹಾಗೂ ಮ್ಯಾಜಿಸ್ಟ್ರೇಟ್ರಿಂದ ಪ್ರಮಾಣ ಪತ್ರವನ್ನೂ ಪಡೆಯದ ಹಿನ್ನೆಲೆ, ನ್ಯಾಯಾಲಯವು ಕಲಂ 50 ಎನ್ಡಿಪಿಎಸ್ ಕಾಯ್ದೆಯನ್ವಯ ಆರೋಪಿತನ ಮಾನವೀಯತೆ ದೃಷ್ಠಿಯಲ್ಲಿ ಆತನ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದು, ಆರೋಪಿ ಶಿವಕುಮಾರ್ ನನ್ನು ಬಿಡುಗಡೆಗೊಳಿಸಿದೆ.
ಈ ಪ್ರಕರಣದಲ್ಲಿ ವಕೀಲರಾದ ಸುನಿಲ್ಕುಮಾರ್ ಎಸ್. ಮತ್ತು ಲಕ್ಷ್ಮೀಕಾಂತ್ ಜಿ. ಅವರು ಆರೋಪಿಯ ಪರವಾಗಿ ವಾದ ಮಂಡಿಸಿದ್ದಾರೆ.