ಬೆಂಗಳೂರು: ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಇದರ ಅಡಿಯಲ್ಲಿ 21 ಸಂಸ್ಥೆಗಳಿದ್ದು, ಸಂಸ್ಥೆಗಳಲ್ಲಿ ಯಾವುದೇ ಜಾತಿ ಆಧಾರಿತ ಶೋಷಣೆಗೆ ಅವಕಾಶ ನೀಡಲಾಗಿಲ್ಲ ಎಂದು ಸೊಸೈಟಿ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಗುರುವಾರ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರಕಟನೆ ಹೊರಡಿಸಿದ್ದು, ‘ಸಂಸ್ಥೆಗಳ ದಿನನಿತ್ಯದ ಆಡಳಿತದಲ್ಲಿ ವರ್ಗಾವಣೆ ಒಂದು ಸಹಜ ಪ್ರಕ್ರಿಯೆ. ಹಲವಾರು ದಶಕಗಳಿಂದ ಅಂತರ ಕಾಲೇಜು, ಅಂತರ ಸಂಸ್ಥೆಗಳ ಮಧ್ಯೆ ವರ್ಗಾವಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಜಾತಿ ಮತ್ತು ವರ್ಣಭೇಧವಿಲ್ಲದೆ ಎಲ್ಲ ಸಮುದಾಯದ ಉದ್ಯೋಗಿಗಳಿಗೂ ಕಾನೂನಿನ ಅಡಿಯಲ್ಲಿ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನು ನೀಡುತ್ತಾ ಬರಲಾಗಿದೆ ಎಂದಿದ್ದಾರೆ.
ಫೆ.6ರಂದು ನಡೆದಂತಹ ಘಟನೆಯಿಂದಾಗಿ, ನಮ್ಮ ಶೈಕ್ಷಣಿಕ ಸಂಸ್ಥೆಯಲ್ಲಿ ಜಾತಿಭೇಧದ ಮೂಲಕ ತೊಂದರೆ ನೀಡಲಾಗುತ್ತಿದೆ ಎನ್ನುವ ಮನೋಭಾವ ಜನರಲ್ಲಿ ಮೂಡುವಂತೆ ಮಾಡುವ ಪ್ರಯತ್ನ ನಡೆದಿದ್ದು ಬಹಳ ಬೇಸರದ ಸಂಗತಿಯಾಗಿದೆ. ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ 25 ವರ್ಷಗಳ ಅವಧಿಯಲ್ಲಿ 14.5 ವರ್ಷಕ್ಕೂ ಹೆಚ್ಚು ಕಾಲ ಪ.ಜಾತಿ/ಪ.ಪಂಗಡದ ಅಧ್ಯಾಪಕರು ಪ್ರಾಂಶಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಆಡಳಿತ ಮಂಡಳಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುವಂತಹ ಸಂಸ್ಥೆಯಾಗಿದೆ. ಈ ಸಂಸ್ಥೆಗಳಲ್ಲಿ ಜಾತಿಯಾಧಾರಿತವಾಗಿ ಅಥವಾ ಯಾವುದೇ ಪೂರ್ವಾಗ್ರಹ ಪೀಡಿತರಾಗಿ ನಿರ್ಧಾರಗಳನ್ನು ತಗೆದುಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.