ಬೈಕ್ ನಲ್ಲಿ ತೆರಳುತ್ತಿದ್ದ ಟೆಕ್ಕಿಯೊಬ್ಬರಿಗೆ ಒದ್ದು, ಕೆಳಗೆ ಬೀಳಿಸಿದ ದುಷ್ಕರ್ಮಿಗಳು ನಂತರ ನಗದು, ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಬಾಣಸವಾಡಿ ಮುಖ್ಯರಸ್ತೆಯಲ್ಲಿ ನಡೆದಿದೆ. ಬೆಂಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಟೆಕ್ಕಿಯೊಬ್ಬರಿಗೆ ಒದ್ದು, ಕೆಳಗೆ ಬೀಳಿಸಿದ ದುಷ್ಕರ್ಮಿಗಳು ನಂತರ ನಗದು, ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಬಾಣಸವಾಡಿ ಮುಖ್ಯರಸ್ತೆಯಲ್ಲಿ ನಡೆದಿದೆ.
ಆರ್ ಟಿ ನಗರದ ಕಾವಲ್ಬೈರಸಂದ್ರ ನಿವಾಸಿ ರಾಹುಲ್ ಕನಿಕನ್ (26) ದರೋಡೆಕೋರರ ದಾಳಿಗೆ ಒಳಗಾದ ಯುವಕ. ಐಟಿಸಿ ಕಂಪನಿ ಎದುರು ಬುಧವಾರ ಮಧ್ಯರಾತ್ರಿ 12.30ರಿಂದ 1ರ ನಡುವೆ ಈ ಘಟನೆ ನಡೆದಿದೆ.
ಆನ್ಲೈನ್ ಕೋರ್ಸ್ ಓದುತ್ತಿರುವ ರಾಹುಲ್ ಅವರು ಬುಧವಾರ ಸಂಜೆ 4 ಗಂಟೆ ಸುಮಾರಿಗೆ ದೊಡ್ಡ ಬಾಣಸವಾಡಿ ಮುಖ್ಯರಸ್ತೆಯ ಮುಕುಂದ ಥಿಯೇಟರ್ ಬಳಿ ತನ್ನ ಸ್ನೇಹಿತರೊಂದಿಗೆ ಗ್ರೂಪ್ ಡಿಸ್ಕರ್ಷನ್ ಮಾಡಲು ಹೋಗಿದ್ದರು. ಬಳಿಕ ಬೈಕ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಚಲಿಸುತ್ತಿದ್ದ ಬೈಕ್ ಬಳಿ ಬಂದಿರುವ ದುಷ್ಕರ್ಮಿಗಳು, ಕಾಲಿನಿಂದ ಒದ್ದಿದ್ದಾರೆ. ಈ ವೇಳೆ ರಾಹುಲ್ ಅವರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪವಾಡ ಸದೃಶ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೆಳಗೆ ಬಿದ್ದಿದ್ದ ರಾಹುಲ್ ಅವರ ಬಳಿ ಚಾಕು ತೋರಿಸಿ ದುಷ್ಕರ್ಮಿಗಳು ಬೆದರಿಸಲು ಮುಂದಾಗಿದ್ದಾರೆ. ಕೂಡಲೇ ದುಷ್ಕರ್ಮಿಗಳು ತಳ್ಳಿದ ರಾಹುಲ್ ಅವರು ಬೈಕ್ ಬಿಟ್ಟು ಸ್ಥಳದಿಂದ ಅಪಾರ್ಟ್ ಮೆಂಟ್ ವೊಂದಲ ಬಳಿ ಓಡಿದ್ದಾರೆ. ಬಳಿಕ ದುಷ್ಕರ್ಮಿಗಳು ರಾಹುಲ್ ಅವರ ಜೇಬಿನಿಂದ ಬಿದ್ದಿದ್ದ ಮೊಬೈಲ್ ಹಾಗೂ ಬೈಕ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ವಲ್ಪ ದೂರದವರೆಗೆ ಬೈಕ್ ಚಲಾಯಿಸಿರುವ ಆರೋಪಿಗಳು, ಬಳಿಕ ಬೈಕ್ ನ್ನು ಮೇಲ್ಸೇತುವೆ ಬಳಿಯೇ ಬಿಟ್ಟು ಹೋಗಿದ್ದಾರೆ. ಬೆಳಿಗ್ಗೆ ತಂದೆ ಜೊತೆಗೆ ಸ್ಥಳಕ್ಕೆ ರಾಹುಲ್ ಬಂದಿದ್ದು, ಕೆಲ ದೂರದಲ್ಲಿ ಬೈಕ್ ಇರುವುದು ಪತ್ತೆಯಾಗಿದೆ.
ಘಟನೆ ಕುರಿತು ರಾಹುಲ್ ತಂದೆ ಮುರಳಿ ಕನಿಕನ್ ಅವರು ಮಾತನಾಡಿ, ನನ್ನ ಮಗ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದಾನೆ. ಅವನು ಇನ್ನೂ ಅದರಿಂದ ಹೊರಬರಬೇಕಾಗಿದೆ. ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಂತಹ ಘಟನೆಯನ್ನು ನೋಡುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಪುಲಕೇಶಿನಗರ ಪೊಲೀಸರು ಅಪರಿಚಿತ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392 ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದಾರೆ.
ದುಷ್ಕರ್ಮಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಓರ್ವ ಚಾಕು ಹಿಡಿಕೊಂಡಿದ್ದ. ಎಲ್ಲರೂ 20-22 ವರ್ಷ ವಯಸ್ಸಿನವರೇ ಆಗಿದ್ದಾರೆಂದು ರಾಹುಲ್ ದೂರಿನಲ್ಲಿ ಹೇಳಿಕೊಂಡಿದ್ದಾರೆ.