ಬೆಂಗಳೂರು: ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 26 ವರ್ಷದ ಎಚ್ಡಿಎಫ್ಸಿ ಬ್ಯಾಂಕ್ ಮಹಿಳಾ ಉದ್ಯೋಗಿ ಮೃತಪಟ್ಟಿದ್ದಾರೆ. ಮೊನ್ನೆ ಸೋಮವಾರ ರಾಜಾಜಿನಗರದಲ್ಲಿ ವೇಗವಾಗಿ ಬಂದಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ಮೃತರನ್ನು ಯೋಗೇಶ್ವರಿ ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಹೊರಭಾಗದ ಮೂಲದವರಾಗಿದ್ದು, ನಗರದಲ್ಲಿರುವ ಪಿಜಿ ವಸತಿಯಲ್ಲಿ ವಾಸಿಸುತ್ತಿದ್ದರು. ರಾಜಾಜಿನಗರದ ಎಚ್ಡಿಎಫ್ಸಿ ಹೋಂ ಲೋನ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಮಧ್ಯಾಹ್ನ ಸುಮಾರು 12.45ರ ವೇಳೆಗೆ, ಊಟ ತರಲು ಕಚೇರಿಯಿಂದ ಹೊರಗೆ ಬಂದಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ವೈಟ್ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಮಧ್ಯಭಾಗದ ಬಳಿ ಯೋಗೇಶ್ವರಿ ಎಚ್ಚರಿಕೆಯಿಂದ ರಸ್ತೆ ದಾಟುತ್ತಿರುವುದು ಕಾಣಿಸುತ್ತದೆ. ಇದೇ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ.
ಅವಸರವೇ ಅಪಘಾತಕ್ಕೆ ಕಾರಣ. ರಸ್ತೆ ದಾಟುವಾಗ ಎಚ್ಚರ…
ಊಟಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ ಯುವತಿಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟ ಘಟನೆ ನಗರದ ರಾಜ್ ಕುಮಾರ್ ರಸ್ತೆಯ ಹೆಚ್ಡಿಎಫ್ಸಿ ಬ್ಯಾಂಕ್ ಬಳಿ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್… pic.twitter.com/Wwm1ohdtGP
— kannadaprabha (@KannadaPrabha) February 18, 2026
ರಸ್ತೆ ಕಾಮಗಾರಿಯಿಂದ ಸಂಚಾರ ಭಾಗಶಃ ನಿರ್ಬಂಧಗೊಂಡಿದ್ದ ಭಾಗವನ್ನು ದಾಟುತ್ತಿದ್ದ ವೇಳೆ, ರಾಜಾಜಿನಗರ ಪ್ರವೇಶ ದ್ವಾರದಿಂದ ಸುಗುಣ ಆಸ್ಪತ್ರೆ ಕಡೆಗೆ ವೇಗವಾಗಿ ಬರುತ್ತಿದ್ದ ಬೈಕ್ ಯೋಗೇಶ್ವರಿಗೆ ಬಲವಾಗಿ ಡಿಕ್ಕಿ ಹೊಡೆದಿತು. ಡಿಕ್ಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಅವರು ಹಲವಾರು ಅಡಿ ಎತ್ತರಕ್ಕೆ ಎಸೆಯಲ್ಪಟ್ಟು ಬಳಿಕ ರಸ್ತೆಗೆ ಬಿದ್ದರು.
ಅಪಘಾತ ಸಂಭವಿಸಿದಾಗ ಯೋಗೇಶ್ವರಿ ಹಿಂದೆ ಕೆಲವೇ ಹೆಜ್ಜೆಗಳ ದೂರದಲ್ಲಿ ನಡೆದುಕೊಂಡು ಬರುತ್ತಿದ್ದ ಸಹೋದ್ಯೋಗಿಯೊಬ್ಬರು ಘಟನೆ ನೆನಪಿಸಿಕೊಂಡು, “ನಾವು ಊಟ ಮುಗಿಸಿ ಮರಳಿ ಬರುತ್ತಿದ್ದೆವು. ರಸ್ತೆಯ ಒಂದು ಭಾಗವನ್ನು ಈಗಷ್ಟೇ ದಾಟಿದ್ದೆವು. ಬೈಕ್ ತುಂಬಾ ವೇಗದಲ್ಲಿತ್ತು. ಬಲವಾಗಿ ಡಿಕ್ಕಿ ಹೊಡೆದಿದ್ದರಿಂದ ಅವರು ಉರುಳಿಬಿದ್ದರು. ನನಗೆ ಆಘಾತವುಂಟಾಯಿತು ಎಂದರು.
ಪೊಲೀಸರ ಮಾಹಿತಿ ಪ್ರಕಾರ, ಬೈಕ್ ಸವಾರ ಕೂಡ ನಿಯಂತ್ರಣ ಕಳೆದುಕೊಂಡು ಸುಮಾರು 100 ಮೀಟರ್ ದೂರ ರಸ್ತೆ ಮೇಲೆ ಜಾರಿ ಹೋಗಿದ್ದಾನೆ. ಬೈಕ್ ಸವಾರ ಪ್ರಜ್ಞೆಯಲ್ಲಿದ್ದ ಕಾರಣ, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಯೋಗೇಶ್ವರಿಗೆ ಗಂಭೀರ ಒಳಗಾಯಗಳು ಮತ್ತು ಅನೇಕ ಎಲುಬು ಮುರಿತಗಳು ಸಂಭವಿಸಿದ್ದವು.
ಸ್ಥಳೀಯರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ತೀವ್ರ ಚಿಕಿತ್ಸೆ ನೀಡಿದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಅದೇ ದಿನ ರಾತ್ರಿ ಮೃತಪಟ್ಟರು.
ರಾಜಾಜಿನಗರ ಸಂಚಾರ ಪೊಲೀಸರು ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆ ಆರೋಪದಲ್ಲಿ ಬೈಕ್ ಸವಾರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೈಟ್ಟಾಪಿಂಗ್ ಕಾಮಗಾರಿಯಿಂದ ರಸ್ತೆ ಭಾಗ ಕಿರಿದಾಗಿದೆ. ಇಂತಹ ಸಂದರ್ಭಗಳಲ್ಲಿ ವಾಹನ ಸವಾರರು ವೇಗ ಕಡಿಮೆ ಮಾಡಬೇಕು. ಅಪಘಾತಕ್ಕೆ ಕಾರಣವಾದ ವಾಹನವು ಅನುಮತಿ ಸ್ಪೀಡ್ ಗಿಂತ ಹೆಚ್ಚು ವೇಗದಲ್ಲಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
