ಬೆಂಗಳೂರು: ಬಿರುಗಾಳಿ ಮಳೆಗೆ ಮನೆಯ ಮುಂಭಾಗದ ಗೇಟ್ ತುಂಡಾಗಿ ಬಿದ್ದ ಪರಿಣಾಮ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನೆಲಮಂಗಲದ ವಾಜರಹಳ್ಳಿಯಲ್ಲಿ ವರದಿಯಾಗಿದೆ.
ಯಲ್ಲಮ್ಮ(7) ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ಮೇ 9ರ ಸಂಜೆ ಎಂದಿನಂತೆ ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಆದರೆ, ಈ ವೇಳೆ ಬಿರುಗಾಳಿ ಮಳೆಯ ಹೊಡೆತಕ್ಕೆ ಗೇಟ್ ಹಠಾತ್ ತುಂಡಾಗಿ ಬಾಲಕಿಯ ಮೇಲೆ ರಭಸವಾಗಿ ಬಿದ್ದಿದೆ. ಗೇಟ್ ಕೆಳಗೆ ಸಿಲುಕಿದ ಬಾಲಕಿ ಯಲ್ಲಮ್ಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮುಕ್ಕಣ್ಣ ಮತ್ತು ಬಾಲಮ್ಮ ದಂಪತಿಯ ಮಗಳು ಯಲ್ಲಮ್ಮ. ರಾಯಚೂರು ಜಿಲ್ಲೆಯ ದೇವದುರ್ಗದ ಮೂಲದವರಾದ ಇವರು ಗಾರೆ ಕೆಲಸ ಮಾಡಲು ನೆಲಮಂಗಲಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.