ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಮತ್ತಷ್ಟು ಹೈಟೆಕ್ ಟಚ್ ನೀಡಲು ಚಿಂತನೆಗಳು ನಡೆಯುತ್ತಿದ್ದು, ನಿಲ್ದಾಣದಲ್ಲಿ ಅಂದವಾದ ಚಿತ್ರಗಳ ಬಿಡಿಸಿ, ಜನರನ್ನು ಆಕರ್ಷಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಬೆಂಗಳೂರು: ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಮತ್ತಷ್ಟು ಹೈಟೆಕ್ ಟಚ್ ನೀಡಲು ಚಿಂತನೆಗಳು ನಡೆಯುತ್ತಿದ್ದು, ನಿಲ್ದಾಣದಲ್ಲಿ ಅಂದವಾದ ಚಿತ್ರಗಳ ಬಿಡಿಸಿ, ಜನರನ್ನು ಆಕರ್ಷಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ನಿಲ್ದಾಣಗಳ ಗೋಡೆಗಳ ಮೇಲೆ ಶಿಲ್ಪಕಲೆಗಳು, ವರ್ಣಚಿತ್ರಗಳು, ಕಲಾಕೃತಿಗಳ ಬಿಡಿಸಲು ಅಧಿಕಾರಿಗಳು ಹುಬ್ಬಳ್ಳಿ ಮೂಲದ ಸ್ಟಾರ್ಟ್ಅಪ್ ಸಂಸ್ಥೆ ಆರ್ಟ್ವಾಲಿಯೊಂದಿಗೆ ಒಪ್ಪಂಕ್ಕೆ ಸಹಿ ಹಾಕಿದ್ದಾರೆಂದು ತಿಳಿದುಬಂದಿದೆ.
ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವವನ್ನು ಹೆಚ್ಚಿಸಲು ಆರ್ಟ್ ಸ್ಟ್ರೀಟ್ ಇಂಟರ್ನ್ಯಾಷನಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಆರ್ಟ್ವಾಲಿ) ಜೊತೆಗೆ ಐದು ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಅವರು ಹೇಳಿದ್ದಾರೆ.
ಹಂತ ಹಂತವಾಗಿ ಕೆಎಸ್ಆರ್ ಬೆಂಗಳೂರು, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಕೃಷ್ಣರಾಜ ಪುರ, ಯಲಹಂಕ ಮತ್ತು ಮಲ್ಲೇಶ್ವರಂನಲ್ಲಿಯೂ ಸುಂದರ ಚಿತ್ರಗಳನ್ನು ಬಿಡಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲ್ವೇ ಮಂಡಳಿ ಅಧಿಕಾರಿಗಳಿಂದ ಬೆಂಗಳೂರು ಉಪನಗರ ರೈಲು ಯೋಜನೆ ಸೇರಿ ಹಲವು ಯೋಜನೆಗಳ ಪರಿಶೀಲನೆ
ಮೊದಲ ಹಂತದಲ್ಲಿ ಕೆಎಸ್ಆರ್, ಯಲಹಂಕ ಮತ್ತು ಎಸ್ಎಂವಿಟಿಯಲ್ಲಿ ಚಿತ್ರಕಲೆಗಳನ್ನು ಮರು ಬಿಡಿಸಲಾಗುವುದು. ಕೆಎಸ್ಆರ್ ನಿಲ್ದಾಣದ ಸುತ್ತಲೂ ನಡೆದರೆ ಕಣ್ಣಿಗೆ ಕಟ್ಟುವ ಅನೇಕ ಸ್ಥಾಪನೆಗಳನ್ನು ನಾವು ನೋಡಬಹುದಾಗಿದೆ. ಕೆಎಸ್ಆರ್ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದಲ್ಲಿ ಗಾಂಧಿ ಪ್ರತಿಮೆ ಮತ್ತು ಚಕ್ರವೊಂದು ಬಂದಿದ್ದು, ಕೃತಕ ಜಲಪಾತದ ಮುಂಭಾಗದಲ್ಲಿ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ‘ಮೇಕ್ ಇನ್ ಇಂಡಿಯಾ’ ಸಿಂಹವನ್ನು ಸ್ಥಾಪನೆ ಮಾಡಲಾಗಿದೆ.
ಯಲಹಂಕದ ವೈಟಿಂಗ್ ಹಾಲ್ ನಲ್ಲಿ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುವುದು. ಈ ಚಿತ್ರಕಲೆಗಳು SMVT ನಿಲ್ದಾಣವನ್ನು ಮತ್ತಷ್ಟು ಸುಧಾರಿಸಲಿದೆ. ಚಿತ್ರಕಲೆ ಜೊತೆಗೆ ಹಿತವಾದ ಬೆಳಕು ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದು ಪ್ರಯಾಣಿಕರನ್ನು ಮತ್ತಷ್ಟು ಆಕರ್ಷಿಸುತ್ತದೆ ಎಂದು ಹೇಳಿದ್ದಾರೆ.
ಕಲಾ ಸ್ಥಾಪನೆಗಳ ಕುರಿತಂತೆಯೂ ಮಾತುಕತೆಗಳು ನಡೆದಿವೆ. ಪ್ಲಾಟ್ಫಾರ್ಮ್ 7 ರ ಕೆಎಸ್ಆರ್ ಪ್ರವೇಶ ದ್ವಾರದಲ್ಲಿ ಕಲಾತ್ಮಕ ಗಂಡಬೇರುಂಡ, ಗಾರ್ಡನ್ ಸಿಟಿ ಪಾಟ್ ತರುವ ಕುರಿತು ಚಿಂತನೆ ನಡೆಯುತ್ತಿವೆ. ಎಸ್ಎಂವಿಟಿಯಲ್ಲಿ ಚನ್ನಪಟ್ಟಣದ ಪ್ರಸಿತ್ಥ ಕಲಾಕೃತಿಗಳನ್ನು ತರಲು ನಿರ್ಧರಿಸಲಾಗಿದೆ. 5 ವರ್ಷಗಳ ಅವಧಿಗೆ ಒಪ್ಪಂದಗಳಾಗಿದೆ ಎಂದು ತಿಳಿಸಿದ್ದಾರೆ.
ನೈಋತ್ಯ ರೈಲ್ವೆ ವಲಯ ಈ ಹಿಂದೆ ಆರ್ಟ್ವಾಲಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳ ರೈಲು ನಿಲ್ದಾಣಗಳಲ್ಲಿ ಕಲಾಕೃತಿಗಳನ್ನು ಬಿಡಿಸಲಾಗಿತ್ತು.