ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಯುವಕನ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. 68 ಬಾರಿ ಮಚ್ಚಿನಿಂದ ಹೊಡೆದು ಮನಸೋ ಇಚ್ಚೆ ಥಳಿಸಿದ್ದಾರೆ. ಬಳಿಕ ಕುಣಿದು ಕುಪ್ಪಳಿಸಿದ್ದಾರೆ.
ಮಾರ್ಚ್ 09 ಸೋಮವಾರ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂತೋಷ್ ಎಂಬಾತನ ಮೇಲೆ ಮೂವರು ಯುವಕರು ದಾಳಿ ಮಾಡಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
68 ಬಾರಿ ಮಚ್ಚೇಟು ಬಿದ್ರು ಅದೃಷ್ಟವಶಾತ್ ಸಂತೋಷ್ ಜೀವ ಉಳಿದಿದೆ. ಮಚ್ಚಿನಿಂದ ಚುಚ್ಚಿದ ದುಷ್ಕರ್ಮಿಗಳು ಬಳಿಕ ಡ್ಯಾನ್ಸ್ ಮಾಡಿ ವಿಕೃತಿ ಮೆರೆದಿದ್ದಾರೆ. ಶರತ್ ಆ್ಯಂಡ್ ಗ್ಯಾಂಗ್ ನಿಂದ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಅಣ್ಣನ ಕೊಲೆಯ ಪ್ರತೀಕಾರಕ್ಕೆ ಮಾರಕಾಸ್ತ್ರದಿಂದ ಅಗ್ರಹಾರ ದಾಸರಹಳ್ಳಿ ನಿವಾಸಿ ಸಂತೋಷ್ ಮೇಲೆ ಶರತ್ ಅಂಡ್ ಗ್ಯಾಂಗ್ ಅಟ್ಯಾಕ್ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. 2024ರಲ್ಲಿ ಸಂತೋಷ್ನಿಂದ ಮೋಹನ್ ಎಂಬಾತನ ಕೊಲೆ ನಡೆದಿತ್ತು. ಕಾರಿನ ವಿಚಾರಕ್ಕೆ ಇಬ್ಬರ ನಡುವೆ ಬೆಂಗಳೂರಿನಲ್ಲಿ ಗಲಾಟೆ ನಡೆದಿದೆ. ಈ ವೇಳೆ ಮಂಡ್ಯದಲ್ಲಿ ಕುಡಿದು ಕೊಳ್ಳೇಗಾಲಕ್ಕೆ ಹೋಗಿ ಗಲಾಟೆ ಮಾಡಿದ್ದ ಸಂತೋಷ್ ಮೋಹನ್ ಗೆ ಕಾಲಿಂದ ಒದ್ದು ಕೊಲೆ ಮಾಡಿದ್ದನಂತೆ. ಬಳಿಕ ಕೊಳ್ಳೆಗಾಲದ ಕೆರೆಯಲ್ಲಿ ಮೃತದೇಹವನ್ನು ಬಿಸಾಡಿ ಹೋಗಿದ್ದ ಎನ್ನಲಾಗುತ್ತಿದೆ.
ಈ ಸಂಬಂಧ ಕೊಳ್ಳೇಗಾಲ ಪೊಲೀಸ್ ಸ್ಟೇಷನ್ ನಲ್ಲಿ ಮೊದಲಿಗೆ ಯುಡಿಆರ್ ಆಗಿತ್ತು. ನಂತರ ಕೊಲೆ ಪ್ರಕರಣ ದಾಖಲಿಸಿ ಸಂತೋಷ ಬಂಧಿಸಿದ್ದ ಕೊಳ್ಳೆಗಾಲ ಪೊಲೀಸರು ಆರೋಪಿಯನ್ನ ಜೈಲಿಗಟ್ಟಿದ್ರು. ಕೊಲೆ ಕೇಸ್ ನಲ್ಲಿ ಜೈಲಿನಲ್ಲಿ ನಾಲ್ಕು ವರ್ಷ ಇದ್ದು, ಇತ್ತೀಚೆಗಷ್ಟೇ ಜಾಮೀನು ಮೇಲೆ ಸಂತೋಷ್ ಹೊರ ಬಂದಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಾರ್ಚ್ 9ರಂದು ಆರೋಪಿ ಶರತ್ ಅಂಡ್ ಗ್ಯಾಂಗ್ ಕುಡಿದು ಸಂತೋಷ್ ಮೇಲೆ ದಾಳಿ ಮಾಡಿದೆ ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
