ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ನವ ನಗರೋತಾನ ಯೋಜನೆಯಡಿ 29.31 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಸತಿ ಸಚಿವ ಝಮೀರ್ ಅಹಮದ್ ಖಾನ್ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
ಚಾಮರಾಜಪೇಟೆಯ ವಾರ್ಡ್ ಸಂಖ್ಯೆ-140 ಹಾಗೂ 137 ವ್ಯಾಪ್ತಿಗೆ ಬರುವ ಎನ್ಟಿ ಪೇಟೆ, ಮಕ್ಕಳ ಕೂಟ, ಚಾಮರಾಜಪೇಟೆ ಮೂರನೆ ಹಾಗೂ ನಾಲ್ಕನೆ ಮುಖ್ಯರಸ್ತೆಯಲ್ಲಿ ರಸ್ತೆ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ವೇಳೆ ರಾಯಪುರಂನಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ 2ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಬಿಬಿಎಂಪಿ ಕಾಲೇಜು ಉದ್ಘಾಟನೆ ಮಾಡಿದರು.
60ಲಕ್ಷ ರೂ.ವೆಚ್ಚದಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ವೇಳೆ ಸ್ಥಳೀಯ ಮುಖಂಡರಾದ ಅಲ್ತಾಫ್ ಖಾನ್, ಚಂದ್ರಶೇಖರ್, ಸರ್ವರ್ ಬೇಗ್, ಗೌಸಿ, ವಿನಾಯಕ್, ನಾರಾಯಣ ಸ್ವಾಮಿ, ಸತ್ಯಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.