ಬೆಳಗಾವಿ: ಬೆಳಗಾವಿಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಅವಧಿ ಮೀರಿದ ಪೌಷ್ಟಿಕ ಆಹಾರ ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಮಕ್ಕಳ ಪೌಷ್ಟಿಕಾಂಶ ಕಾರ್ಯಕ್ರಮಗಳ ಸುರಕ್ಷತೆ ಮತ್ತು ಮೇಲ್ವಿಚಾರಣೆಯ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡಿದೆ.
ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ಅವರು, ಸ್ಥಳೀಯ ಯುವಕರೊಂದಿಗೆ ಗ್ರಾಮದಲ್ಲಿನ ಮೂರು ಅಂಗನವಾಡಿ ಕೇಂದ್ರಗಳ ಆಹಾರ ಸಂಗ್ರಹವನ್ನು ಪರಿಶೀಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಪರಿಶೀಲನೆ ವೇಳೆ ಮೂರುರಿಂದ ಆರು ತಿಂಗಳ ಹಿಂದೆಯೇ ಅವಧಿ ಮುಗಿದ ಆಹಾರ ವಸ್ತುಗಳನ್ನು ಮಕ್ಕಳಿಗೆ ವಿತರಿಸುತ್ತಿರುವುದಾಗಿ ತಿಳಿದುಬಂದಿದೆ ಎನ್ನಲಾಗಿದೆ.
ಈ ಕುರಿತ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೀಡಿಯೋ ವೈರಲ್ ಆಗಿದೆ. ವಿಡಿಯೋಗಳಲ್ಲಿ ಹುಳು ಹಿಡಿದ ರವೆ, ಸಿರಿಧಾನ್ಯ ಲಡ್ಡು, ಸಾಂಬಾರ್ ಪುಡಿ ಹಾಗೂ ಸಾಸಿವೆ ಪ್ಯಾಕೆಟ್ಗಳ ಮೇಲೆ ಅಕ್ಟೋಬರ್ ಮತ್ತು ನವೆಂಬರ್ 2025ರ ಅವಧಿ ದಿನಾಂಕಗಳಿರುವುದು ಕಂಡು ಬಂದಿದೆ.
2025ರಲ್ಲೇ ಅವಧಿ ಮುಗಿದ ಸಿರಿಧಾನ್ಯ ಲಡ್ಡುಗಳನ್ನು 2026ರ ಫೆಬ್ರವರಿಯಲ್ಲಿ ವಿತರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಮಾಹಿತಿ ಪೋಷಕರಲ್ಲಿ ಆತಂಕ ಮೂಡಿಸಿದೆ.
“ಇದು ಚಿಕ್ಕ ಮಕ್ಕಳ ಜೀವದ ಜೊತೆ ಆಟವಾಡುವಂತದ್ದು. ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು?” ಎಂದು ಕಸ್ತೂರಿ ಬಾವಿ ಅವರು ಪ್ರಶ್ನಿಸಿದ್ದಾರೆ. ಈ ಸಮಸ್ಯೆ ಒಂದೇ ಗ್ರಾಮಕ್ಕೆ ಸೀಮಿತವಲ್ಲದೆ ಬೇರೆಡೆಗಳಲ್ಲಿಯೂ ಇರಬಹುದೆಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಆರೋಪಗಳನ್ನು ತಳ್ಳಿ ಹಾಕಿದ್ದು, ಫೆಬ್ರವರಿ 7ರಂದು ನಡೆದ ಪರಿಶೀಲನೆಯಲ್ಲಿ ಅವಧಿ ಮೀರಿದ ಆಹಾರ ಪ್ಯಾಕೆಟ್ಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ವೈರಲ್ ವಿಡಿಯೋಗಳು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದು, ಇದೊಂದು ಪಿತೂರಿಯಾಗಿದೆ ಎಂದು ಹೇಳಿದ್ದಾರೆ.
