ಬೈಂದೂರು : ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಸದರ ಕಚೇರಿ ಚಲೋ ಹೋರಾಟ ಕಾರ್ಯಕ್ರಮದ ಅಂಗವಾಗಿ ಸಿಐಟಿಯು ಬೈಂದೂರು ತಾಲೂಕು ಸಮಿತಿ ನೇತೃತ್ವದಲ್ಲಿ ಎರಡು ಕೋಟಿ ಸಹಿ ಸಂಗ್ರಹದ ಅಂದೋಲನಕ್ಕೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಬೈಂದೂರು ತಹಶೀಲ್ದಾರ್ ಕಚೇರಿ ಆಡಳಿತ ಸೌಧ ಬಳಿಯ ಸಾರ್ವಜನಿಕ ಬಸ್ಸು ನಿಲ್ದಾಣದಲ್ಲಿ ಸಿಐಟಿಯು ಮುಖಂಡ ರಮೇಶ್ ಗುಲ್ವಾಡಿ ಉದ್ಘಾಟಿಸಿದರು. ಅವರು ಸಿಐಟಿಯು ಜಿಲ್ಲಾ ಮುಖಂಡ ಕಾರ್ಮಿಕ ಧುರೀಣ ಗಣೇಶ ತೊಂಡೆಮಕ್ಕಿ ಇವರಿಗೆ ಸಿಐಟಿಯು ಕೆಂಬಾವುಟವನ್ನು ಹಸ್ತಾಂತರಿಸಿ, ಮಾತನಾಡಿದರು.
ಬೆಲೆ ಏರಿಕೆ- ಬಡತನ- ಹಸಿವು- ಅಪೌಷ್ಟಿಕತೆ ನಿಯಂತ್ರಣ. ವೇತನ- ಉದ್ಯೋಗ- ಜೀವನೋಪಾಯಕ್ಕಾಗಿ, ಕೇಂದ್ರ ಸರಕಾರದ ರೈತ- ಕಾರ್ಮಿಕ- ಜನವಿರೋಧಿ ಕಾನೂನುಗಳ ವಾಪಾಸ್ಸಿಗಾಗಿ, ರಾಜ್ಯವ್ಯಾಪಿ ಎರಡು ಕೋಟಿ ಸಹಿ ಸಂಗ್ರಹ ಅಂದೋಲನದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅವರು ಕರೆ ನೀಡಿದರು.
ಸ್ಥಳಿಯ ಕಾರ್ಮಿಕ ನೇತಾರ ವೆಂಕಟೇಶ ಕೋಣಿ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಇದೇ ಜ.25ರಂದು ಸಹಿ ಸಂಗ್ರಹದ ಸಾಮೂಹಿಕ ಮನವಿಯನ್ನು ಹಸ್ತಾಂತರಿಸಿ, ಲೋಕಸಭೆಯಲ್ಲಿ ರೈತ, ಕಾರ್ಮಿಕ ಪರವಾಗಿ ಮಾತನಾಡುವಂತೆ ಒತ್ತಾಯಿಸಲಾಗುವುದು ಎಂದರು.
ರೈತರ, ಕಾರ್ಮಿಕ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುವ ಹೋರಾಟ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಕಾರ್ಮಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವೆಂಕಟೇಶ್ ಕೋಣಿ ಕರೆ ನೀಡಿದರು.
ಇದೇ ವೇಳೆ ಬೈಂದೂರು ಪೇಟೆಯಲ್ಲಿ ಸಾರ್ವಜನಿಕರಿಂದ ಮನವಿಗೆ ಸಹಿ ಸಂಗ್ರಹ, ಪ್ರಚಾರ ಕರಪತ್ರಗಳನ್ನು ವ್ಯಾಪಕ ವಾಗಿ ಹಂಚುವ ಕಾರ್ಯಕ್ರಮ ದಲ್ಲಿ ಮುಖಂಡರಾದ ರಾಮ ಕಂಬದಕೋಣೆ, ಮಂಜು ಪಡುವರಿ, ಶ್ರೀಧರ ದೇವಾಡಿಗ ಉಪ್ಪುಂದ, ಅಮ್ಮಯ್ಯ ಪೂಜಾರಿ ಬಿಜೂರು, ಸಾವಿತ್ರಿ ಹೆಮ್ಮಾಡಿ, ನಾಗರತ್ನ ಪಡುವರಿ, ಅಣ್ಣಪ್ಪ ಬಿಲ್ಲವ ನಾವುಂದ, ರಾಜು ದೇವಾಡಿಗ ಹೇರೂರು ಅರೆಹೊಳೆಕ್ರಾಸ್, ಲಕ್ಷ್ಮಣ ದೇವಾಡಿಗ ಯಡ್ತರೆ, ರೇವತಿ ಪಡುವರಿ ಮೊದಲಾದವರು ನೇತೃತ್ವ ವಹಿಸಿದ್ದರು.