ಬೈಂದೂರು, ಜ.5: ಉಳ್ಳೂರು-74ರಲ್ಲಿ ಗುರುವಾರ ಕಾರ್ಯಕರ್ತ-ಸಂಚಾರಿ ಕಾರ್ಯಾಲಯವನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು.
ಕ್ಷೇತ್ರದ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಈಗಾಗಲೇ ನಾಲ್ಕು ಕಾರ್ಯಾಲಯಗಳು ಕಾರ್ಯಾಚರಿಸುತ್ತಿವೆ. ಬೈಂದೂರು, ಸಿದ್ದಾಪುರ, ಉಪ್ಪುಂದ ಮತ್ತು ಚಿತ್ತೂರಿನಲ್ಲಿ ಕಾರ್ಯಕರ್ತ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದ ಎಲ್ಲಾ ಭಾಗದ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಶಾಸಕರು ತಿಳಿಸಿದರು.
ಸಂಚಾರಿ ಕಾರ್ಯಾಲಯವು ಕ್ಷೇತ್ರದ ಜನರ ಬಳಿಗೆ ತೆರಳಿ, ಜನರ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು.