ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಗೈಲ್ ಮಂಗಳೂರು ಜೆಬಿಎಫ್ಪಿಎಲ್ ಸಂಸ್ಥೆಗೆ ಭೂಮಿ ನೀಡಿ ಉದ್ಯೋಗ ಪಡೆದ ಪಿಡಿಎಫ್ ಉದ್ಯೋಗಿಗಳಿಗೆ ಉದ್ಯೋಗವನ್ನು ಮುಂದುವರಿಸಲು ಗೈಲ್ಗೆ ಆದೇಶ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ಖಾತೆ ಸಚಿವ ಹರಿದೀಪ್ ಎಸ್ ಪುರಿ ಅವರಿಗೆ ಪತ್ರ ಬರೆದಿರುವ ಸಚಿವ ದಿನೇಶ್ ಗುಂಡೂರಾವ್ ಅವರು ಕರ್ನಾಟಕ ಸರಕಾರದ ಪುನರ್ವಸತಿ ನೀತಿ (ಆರ್ ಆ್ಯಂಡ್ ಆರ್) ಮತ್ತು ಲ್ಯಾಂಡ್ ಲೀಸ್ ಒಪ್ಪಂದದ ಅಡಿಯಲ್ಲಿ ಕಟ್ಟುಪಾಡುಳನ್ನು ಪಾಲಿಸಲು ಗೈಲ್ ಸಂಸ್ಥೆಗೆ ತಮ್ಮ ಸಚಿವಾಲಯದ ಅಧಿಕಾರಿಗಳ ಮೂಲಕ ಸ್ಪಷ್ಟ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ.
ಅಕ್ಟೋಬರ್ 10ರಂದು ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಆಗಿನ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಗೈಲ್ನ ಚೇರ್ಮೆನ್ ಮತ್ತು ಆಡಳಿತ ನಿರ್ದೇಶಕರಿಗೆ ಬರೆದ ಪತ್ರವನ್ನು ಸಚಿವರಿಗೆ ನೀಡಿರುವ ಮನವಿಯೊಂದಿಗೆ ಲಗೆತ್ತಿಸಿದ್ದಾರೆ.
ಇದೇ ವೇಳೆ ಸಚಿವ ಗುಂಡೂ ರಾವ್ ಅವರು ಗೈಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ದೀಕ್ಷಿತ್ ಅವರು ಭೂಮಿ ನೀಡಿದ ಕುಟುಂಬಕ್ಕೆ ಸೇರಿರುವ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿಕೆ ವಿಚಾರದಲ್ಲಿ ಸ್ಪಷ್ಟ ನಿರ್ದೇಶನ ನೀಡುವಂತೆ ಕೇಂದ್ರ ಸರಕಾರದ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ಸಚಿವಾಲಯದ ಉಪಕಾರ್ಯದರ್ಶಿ ಆನಂದ್ ಕುಮಾರ್ ಅವರಿಗೆ ಕಳೆದ ಡಿ.12ರಂದು ಬರೆದಿರುವ ಪತ್ರವನ್ನು ಇದೇ ವೇಳೆ ಕೇಂದ್ರ ಸಚಿವರಿಗೆ ನೀಡಿ ಈ ವಿಚಾರದಲ್ಲಿ ಕೂಡಲೇ ಅಗತ್ಯದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.