ಮಂಗಳೂರು: ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ವಾರ್ಷಿಕ ಪವಿತ್ರ ಪರಮ ಪ್ರಸಾದದ ಮೆರವಣಿಗೆಯು ರವಿವಾರ ನಗರದಲ್ಲಿ ನಡೆಯಿತು. ಮಿಲಾಗ್ರಿಸ್ ಚರ್ಚಿನಲ್ಲಿ ನಡೆದ ವಿಶೇಷ ಬಲಿಪೂಜೆಯ ನೇತೃತ್ವವನ್ನು ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ವಹಿಸಿದ್ದರು. ಅವರೊಂದಿಗೆ ನಗರದ ಹಲವು ಚರ್ಚಿನ ಧರ್ಮಗುರುಗಳು ಭಾಗವಹಿಸಿದ್ದರು. ಬಳಿಕ ಮಿಲಾಗ್ರಿಸ್ ಚರ್ಚ್ನಿಂದ ಹೊರಟ ಮೆರವಣಿಗೆಯು ಹಂಪನಕಟ್ಟೆ ಸರ್ಕಲ್, ಎ.ಬಿ.ಶೆಟ್ಟಿ ಸರ್ಕಲ್ ಮೂಲಕ ರೊಸಾರಿಯೋ ಕೆಥೆಡ್ರಲ್ ಕಡೆಗೆ ಸಾಗಿತು.
ವಿಶೇಷವಾಗಿ ಅಲಂಕೃತಗೊಂಡ ವಾಹನದಲ್ಲಿ ಪವಿತ್ರ ಪರಮ ಪ್ರಸಾದವನ್ನು ಹಿಡಿದುಕೊಂಡು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಮೆರವಣಿಗೆಯಲ್ಲಿ ಸಾಗಿದರೆ ಅವರೊಂದಿಗೆ ಕ್ರೈಸ್ತ ಸಮುದಾಯದ ಸಾವಿರಾರು ಮಂದಿಯಲ್ಲದೆ ಧರ್ಮಗುರುಗಳು, ಭಗಿನಿಯರು ಕೂಡ ಪಾಲ್ಗೊಂಡರು.
ರೊಸಾರಿಯೋದಲ್ಲಿ ವಿಶೇಷ ಪ್ರವಚನ: ಮಿಲಾಗ್ರಿಸ್ನಿಂದ ಹೊರಟ ಪವಿತ್ರ ಪರಮ ಪ್ರಸಾದ ಮೆರವಣಿಗೆಯು ರೊಸಾರಿಯೋ ಕೆಥೆಡ್ರಲ್ ತಲುಪಿದ ಬಳಿಕ ವಿಶೇಷ ಪೂಜೆ ನಡೆಯಿತು. ವರ್ಕಾಡಿ ಚರ್ಚಿನ ಧರ್ಮಗುರು ಫಾ. ಬಾಜಿಲ್ ವಾಸ್ ಪ್ರವಚನ ನೀಡಿದರು.
ಪ್ರಾರ್ಥನೆಯ ವರ್ಷ ಘೋಷಣೆ: ವಿಶೇಷ ಪ್ರವಚನದ ಬಳಿಕ ಪವಿತ್ರ ಪರಮ ಪ್ರಸಾದ ಆರ್ಶೀವಚನ ನಡೆಯಿತು. ಅಲ್ಲದೆ 2024ನೇ ವರ್ಷವನ್ನು ಪ್ರಾರ್ಥನೆಗಾಗಿ ಸಮರ್ಪಿಸಲಾಯಿತು.