Home Uncategorized ಮಟ್ಟುಗುಳ್ಳ, ಶಂಕರಪುರ ಮಲ್ಲಿಗೆಯ ಮಾರುಕಟ್ಟೆ ಅಭಿವೃದ್ಧಿಗೆ ಮಾಹೆಯಲ್ಲಿ ಸಂಶೋಧನ ಆಧಾರಿತ ಇನ್ಕ್ಯುಬೇಶನ್ ಸೌಲಭ್ಯ

ಮಟ್ಟುಗುಳ್ಳ, ಶಂಕರಪುರ ಮಲ್ಲಿಗೆಯ ಮಾರುಕಟ್ಟೆ ಅಭಿವೃದ್ಧಿಗೆ ಮಾಹೆಯಲ್ಲಿ ಸಂಶೋಧನ ಆಧಾರಿತ ಇನ್ಕ್ಯುಬೇಶನ್ ಸೌಲಭ್ಯ

25
0

ಮಣಿಪಾಲ: ವಿಷನ್ ಕರ್ನಾಟಕ ಫೌಂಡೇಶನ್ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಗಳು ಜಿಯೋಗ್ರಾಫಿಕಲ್ ಇಂಡಿಕೇಷನ್ (ಜಿಐ ಟ್ಯಾಗ್) ಪಡೆದಿರುವ ಸ್ಥಳೀಯ ಮಟ್ಟುಗುಳ್ಳ ಹಾಗೂ ಶಂಕರಪುರ ಮಲ್ಲಿಗೆಯ ಮಾರುಕಟ್ಟೆ ಅಭಿವೃದ್ಧಿಗಾಗಿ ಸಂಶೋಧನಾ ಆಧಾರಿತ ಮಣಿಪಾಲದ ಇನ್ಕ್ಯುಬೇಷನ್ ಸೌಲಭ್ಯವನ್ನು ಬಳಸಿಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿವೆ.

ಜಿಐ-ಟ್ಯಾಗ್ ಪಡೆದಿರುವ ಉಡುಪಿ ಜಿಲ್ಲೆಯ ಸುತ್ತಮುತ್ತ ಇರುವ ಉಡುಪಿ ಮಟ್ಟುಗುಳ್ಳ ಮತ್ತು ಶಂಕರಪುರ ಮಲ್ಲಿಗೆ ಬೆಳೆಯುವ ರೈತ ಸಮುದಾಯಗಳನ್ನು ಪ್ರೋತ್ಸಾಹಿಸುವುದು ಹಾಗೂ ಅವರ ಜೀವನಮಟ್ಟವನ್ನು ವೃದ್ಧಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ದೇಶದಲ್ಲೇ ಪ್ರಥಮ: ವಿಷನ್ ಕರ್ನಾಟಕ ಫೌಂಡೇಶನ್‌ನ ಅಧ್ಯಕ್ಷ ಕಿಶೋರ್ ಜಾಗೀರ್ದಾರ್ ಈ ಸಂದರ್ಭದಲ್ಲಿ ಮಾತನಾಡಿ, ಮಾಹೆಯ ವಾಣಿಜ್ಯ ವಿಭಾಗದ ಸಹಭಾಗಿತ್ವದಲ್ಲಿ ವಿಕೆಎಫ್‌ನ ಈ ಸಂಶೋಧನ ಆಧಾರಿತ ಸೌಲಭ್ಯ ಆರಂಭಿಸಲಾಗಿದೆ. ಜಿಐಯೊಂದಿಗೆ ಗುರುತಿಸಿಕೊಂಡಿರುವ, ವಿಶಾಲವಾದ ಮಾರುಕಟ್ಟೆಯನ್ನು ಹೊಂದಿರುವ ಸಮುದಾಯಗಳಿಗಾಗಿ ಇನ್ಕ್ಯುಬೇಶನ್ ವ್ಯವಸ್ಥೆಯನ್ನು ಆರಂಭಿಸಿರುವುದು ಭಾರತದಲ್ಲಿಯೇ ಪ್ರಥಮವಾಗಿದೆ ಎಂದರು.

ಇನ್ಕ್ಯುಬೇಶನ್ ಸೌಲಭ್ಯವು ವ್ಯವಹಾರ ಮುದ್ರೆ, ಬ್ರಾಂಡಿಂಗ್, ಕಾನೂನು ವಿಚಾರ, ಮೌಲ್ಯವರ್ಧನೆ, ಗಣಕೀಕೃತ ಮಾರುಕಟ್ಟೆ ಡಿಜಿಟಲ್ ಮಾರ್ಕೆಟ್‌ಗಳ ಪರಿಶೀಲನೆ, ವ್ಯೆಹಾತ್ಮಕ ನಡೆಗಳು ಮುಂತಾದ ಮಾರುಕಟ್ಟೆ ಕೇಂದ್ರಿತ ಚಟುವಟಿಕೆಗಳನ್ನು ಬೆಂಬಲಿಸುತ್ತದೆ. ಈ ಪ್ರಯತ್ನ ತಳಮಟ್ಟದ ಸಮುದಾಯ-ಆಧಾರಿತ ಅಂತರಗಳನ್ನು ನಿವಾರಿಸುವಲ್ಲಿ ಗಮನಹರಿಸಲಿದೆ ಎಂದರು.

ಆರಂಭದಲ್ಲಿ ಇದು ಎರಡು ಜಿಐ ಆಧಾರಿತ ಕ್ಷೇತ್ರಗಳ ಬಗ್ಗೆ ಗಮನ ಹರಿಸಿದರೆ, ನಿಧಾನವಾಗಿ ಮುಂದಿನ ಎರಡು ವರ್ಷಗಳಲ್ಲಿ ಇಂಥದೇ 46 ಜಿಐ ಆಧಾರಿತ ಕ್ಷೇತ್ರಗಳತ್ತ ಇದನ್ನು ವಿಸ್ತರಿಸುವ ಯೋಜನೆ ಇದೆ ಎಂದು ಕಿಶೋರ್ ಜಾಗಿರ್ದಾರ್ ನುಡಿದರು.

ಮುಂದಿನ ಮೂರು ವರ್ಷಗಳಲ್ಲಿ ವಿಕೆಎಫ್ ರೈತರಿಗೆ, ಸ್ವಸಹಾಯ ಗುಂಪುಗಳಿಗೆ, ಇತರ ಪಾಲುದಾರರಿಗೆ ಉತ್ಪನ್ನಗಳ ಗುಣಮಟ್ಟವನ್ನು ಉತ್ತಮ ಗೊಳಿಸುವಲ್ಲಿ, ಮಾರುಕಟ್ಟೆಯನ್ನು ಒದಗಿಸುವಲ್ಲಿ, ಜಿಐ ಪಟ್ಟಿಯಲ್ಲಿರುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯನ್ನು ದೊರಕಿಸುವಲ್ಲಿ ನೆರವಾಗುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಸಾಮಾನ್ಯ ಸೌಲಭ್ಯ ಕೇಂದ್ರ -ಕಾಮನ್ ಫೆಸಿಲಿಟಿ ಸೆಂಟರ್-ಗಳನ್ನು ಸಣ್ಣ, ಮಧ್ಯಮ ಮತ್ತು ಬೃಹತ್ ಮಟ್ಟದ ಉದ್ಯಮ ಮಳಿಗೆಗಳಲ್ಲಿ ಆರಂಭಿಸುವ ಉದ್ದೇಶ ಹೊಂದಿದೆ ಎಂದರು.

ಮಾಹೆಯ ಉಪಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಈ ಸಹಭಾಗಿತ್ವವು ಸುಸ್ಥಿರ ಅಭಿವೃದ್ಧಿ ಮತ್ತು ಸಾಮುದಾಯಿಕ ಸಬಲೀಕರಣದ ಪ್ರಯಾಣದಲ್ಲಿ ಪ್ರಮುಖ ಮೈಲುಗಲ್ಲಾಗಿದೆ. ಮಾಹೆಯಲ್ಲಿ ಶಿಕ್ಷಣ ಕ್ಷೇತ್ರವು ನಾವೀನ್ಯವನ್ನು ಅಳವಡಿಸುವುದನ್ನು ಮತ್ತು ಸಮಾಜಮುಖಿಯಾಗುವುದರ ಕಡೆಗೆ ಒತ್ತು ನೀಡುತ್ತೇವೆ. ಉಡುಪಿ ಮಟ್ಟುಗುಳ್ಳ ಮತ್ತು ಶಂಕರಪುರ ಉಡುಪಿ ಮಲ್ಲಿಗೆಗಳಂಥ ಜಿಐ ಟ್ಯಾಗ್ ಆಗಿರುವ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಇನ್ಕ್ಯುುಬೇಶನ್ ಪ್ರೋಗ್ರಾಮ್‌ನ್ನು ಬೆಂಬಲಿಸುತ್ತೇವೆ ಎಂದರು.

ಸ್ಥಳೀಯ ಪ್ರತಿಭೆಗಳನ್ನು ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡುವುದರ ಜೊತೆಗೆ, ಈ ಪ್ರದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಕುರಿತು ಕೂಡ ಗಮನಹರಿಸುತ್ತೇವೆ. ನಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರು ಈ ವಿಶಿಷ್ಟ ಅಧ್ಯಯನ ಅನುಭವದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ ಎಂದರು.

ಜಿಐ ಟ್ಯಾಗ್ ಉತ್ಪನ್ನಗಳ ಕರ್ನಾಟಕ ಸಂಪರ್ಕ ಸಂಸ್ಥೆ ನೋಡಲ್ ಏಜೆನ್ಸಿ ವಿಟಿಪಿಸಿಯ ಪ್ರತಿನಿಧಿ, ಬೌದ್ಧಿಕ ಸಂಪನ್ಮೂಲ ಕಾರ್ಯಕ್ರಮಗಳ ಅಧಿಕಾರಿ ಪ್ರಭಾವತಿ ರಾವ್ ಮಾತನಾಡಿ, ವಿಟಿಪಿಸಿಯು ಉಡುಪಿ ಮಟ್ಟು ಗುಳ್ಳ ಮತ್ತು ಶಂಕರಪುರ ಮಲ್ಲಿಗೆಯ ಉತ್ಪಾದಕರನ್ನು ಜಿಐ-ಉತ್ಪನ್ನಗಳ ಅಧಿಕೃತ ಬಳಕೆದಾರರನ್ನಾಗಿ ನೋಂದಣಿ ಮಾಡಿಕೊಳ್ಳಲು ಹೆಜ್ಜೆ ಇರಿಸಲಿದೆ ಎಂದು ಅವರು ನುಡಿದರು.

ಮಾಹೆಯ ಕುಲಸಚಿವ ಡಾ.ಪಿ. ಗಿರಿಧರ ಕಿಣಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ್ ಶೆಣೈ ಅವರು ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದರು.

LEAVE A REPLY

Please enter your comment!
Please enter your name here